September 14, 2026
#ಬೆಂಗಳೂರು

ಶ್ರೀರಾಮ ಭಕ್ತಿಗೋಸ್ಕರ ಇರಬೇಕೇ ಹೊರತು ವೋಟಿಗೋಸ್ಕರ ಅಲ್ಲ

ಬೆಂಗಳೂರು:
ಶ್ರೀರಾಮ ಭಕ್ತಿಗೋಸ್ಕರ ಇರಬೇಕೇ ಹೊರತು ವೋಟಿಗೋಸ್ಕರ ಇರಬಾರದು. ಸ್ವಾರ್ಥಕ್ಕೋಸ್ಕರ ಶ್ರೀರಾಮನ ಬಳಸಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮದ ವಿಚಾರದಲ್ಲಿ ಅನಾವಶ್ಯಕ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ಬಹಳ ಕೆಲಸ ಮಾಡಿದೆ. ಒಂದು ದೇವಸ್ಥಾನ ಮಾತ್ರ ಮುಖ್ಯ ಅಲ್ಲ, ಎಲ್ಲಾ ದೇವಸ್ಥಾನವೂ ಕೂಡ ಮುಖ್ಯ. ಧರ್ಮ ಎಲ್ಲರನ್ನೂ ಉಳಿಸುತ್ತಿದೆ. ಯಾರೋ ಒಬ್ಬರಿಂದ ಧರ್ಮ ಅಲ್ಲ. ಧರ್ಮ ಎಲ್ಲರನ್ನೂ ಒಳಗೊಳ್ಳಬೇಕು ಎಂದರು.
ಸ್ವಾರ್ಥಕ್ಕೋಸ್ಕರ ಶ್ರೀರಾಮನ ಬಳಸಬಾರದು. ಭಕ್ತಿ, ನಂಬಿಕೆ, ವಿಶ್ವಾಸದಿಂದ ಮಾಡಿದರೆ ಎಲ್ಲರೂ ಗೌರವಿಸುತ್ತಾರೆ. ಅಯೋಧ್ಯೆಗೆ ನಾವು ಹೋಗುವುದಕ್ಕೆ ಯಾರ ಪರ್ಮಿಷನ್ ಬೇಕಾಗಿಲ್ಲ. ಭವ್ಯವಾದ ರಾಮ ಮಂದಿರ ಕಟ್ಟಿದ್ದಾರೆ, ಅದನ್ನು ನೋಡಬೇಕು. ಅಯೋಧ್ಯೆಗೆ ಹೋಗುತ್ತೇವೆ ಎಂದು ನಾವು ಹೇಳಿಕೊಳ್ಳಬೇಕಿಲ್ಲ, ತೋರಿಸಿಕೊಳ್ಳಬೇಕಿಲ್ಲ. ರಾಮ ರಾಜ್ಯ ಅಂದ್ರೆ ಏನರ್ಥ? ಹಿಂಸೆ ಸೃಷ್ಟಿ ಮಾಡುವುದು, ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕುವುದು ಯಾವ ರಾಮ ರಾಜ್ಯದ ಪರಿಕಲ್ಪನೆ ಎಂದು ಪ್ರಶ್ನಿಸಿದರು.
ಇನ್ನು ನಿಗಮ, ಮಂಡಳಿ ನೇಮಕಕ್ಕೆ ಸಚಿವರನ್ನು ಪರಿಗಣಿಸಿಲ್ಲ ಎಂಬ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಪಕ್ಷದ ತೀರ್ಮಾನ. ನಿಗಮ ಮಂಡಳಿಗೆ ಯಾರಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಡಬೇಕು ಎಂದು ಪಕ್ಷ ತೀರ್ಮಾನಿಸುತ್ತದೆ. ಎಲ್ಲರನ್ನೂ ಕೇಳಿಕೊಂಡು ಹಂಚಿಕೆ ಮಾಡೋದಿಲ್ಲ. ಪರಮೇಶ್ವರ್ ಅವರ ಅಭಿಪ್ರಾಯ ನೀಡಿದ್ದಾರೆ. ನನ್ನ ಸಲಹೆಯನ್ನೂ ನೀಡಿದ್ದೇನೆ. ನೇಮಕ ಸಂಬAಧ ಸಿಎಂ, ಡಿಸಿಎಂ, ಉಸ್ತುವಾರಿಗಳು ಕುಳಿತು ಚರ್ಚಿಸುತ್ತಾರೆ ಎಂದರು.
ಆದಷ್ಟು ಬೇಗ ನೇಮಕ ಮಾಡಬೇಕು ಎಂದು ಆಸಕ್ತಿ ಇದೆ. ಆದರೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲರನ್ನೂ ತೃಪ್ತಿಪಡಿಸೋದು ಕಷ್ಟ. ಈ ಹಿಂದೆ ನಮ್ಮದೇ ಸರ್ಕಾರ ಇದ್ದಾಗ ವರ್ಷದ ನಂತರ ಹಂಚಿಕೆ ಮಾಡಲಾಗಿತ್ತು. ಈಗ ಆಕಾಂಕ್ಷಿಗಳು ಹೆಚ್ಚಾಗಿರುವ ಕಾರಣ ಸ್ವಲ್ಪ ತಡವಾಗುತ್ತಿದೆ. ಕೆಲವು ಕಡೆ ಸಚಿವರ ಹೆಸರು ಪ್ರಸ್ತಾಪವಾಗಿದೆ. ಗೆಲುವಿನ ಕಾರಣಕ್ಕೆ ಯಾರಿಗೇ ಸೂಚಿಸಿದರೂ ಸ್ಪರ್ಧಿಸಬೇಕಾಗುತ್ತೆ ಎಂದು ತಿಳಿಸಿದರು.

Leave a comment

Your email address will not be published. Required fields are marked *