September 14, 2026
#ಅಂತರರಾಷ್ಟ್ರೀಯ

ಭಾರತ ವಿರೋಧಿ ಪ್ರಚಾರಕ್ಕೆ ಖಲಿಸ್ತಾನ್ ಉಗ್ರರ ಜೊತೆ ಕೈ ಜೋಡಿಸಿದ ಪಾಕ್

ನವದೆಹಲಿ: ಭಾರತ ವಿರೋಧಿ ಪ್ರಚಾರಕ್ಕೆ ಸಂಚು ರೂಪಿಸಲು ಕೆನಡಾದಲ್ಲಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಏಜೆಂಟ್‍ಗಳು ಮತ್ತು ಖಲಿಸ್ತಾನ್ ಭಯೋತ್ಪಾದಕ ಗುಂಪುಗಳ ಮುಖ್ಯಸ್ಥರು ಇತ್ತೀಚೆಗೆ ವ್ಯಾಂಕೋವರ್‌ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.

ಇದೇ ವಾರ ಸಭೆ ನಡೆದಿದ್ದು, ಸಿಖ್ಸ್ ಫಾರ್ ಜಸ್ಟಿಸ್ (ಎಸ್‍ಎಫ್‍ಜೆ) ಮುಖ್ಯಸ್ಥ ಗುರುಪತ್‍ವಂತ್ ಸಿಂಗ್ ಪನ್ನುನ್ ಮತ್ತು ಖಲಿಸ್ತಾನಿ ಸಂಘಟನೆಗಳ ಇತರ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಭಾರತದ ವಿರುದ್ಧ ನಕಾರಾತ್ಮಕ ಪ್ರಚಾರ ಮಾಡಲು ತಿರ್ಮಾನಿಸಲಾಗಿದೆ. ಅಲ್ಲದೇ ಸಾಧ್ಯವಾದಷ್ಟು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಂಘಟನೆಗಳು ಮುಂದಾಗಿವೆ ಎನ್ನುವ ಮಾಹಿತಿ ತಿಳಿದು ಬಂದಿದೆ. 

ಪ್ಲಾನ್-ಕೆ ಎಂದು ಹೆಸರಿಸಲಾದ ಯೋಜನೆಯ ಭಾಗವಾಗಿ ಐಎಸ್‍ಐ ಕಳೆದ ಕೆಲವು ತಿಂಗಳುಗಳಿಂದ ಕೆನಡಾದಲ್ಲಿ ಖಲಿಸ್ತಾನ್ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡುತ್ತಿದೆ. ಈ ಹಣವನ್ನು ಪ್ರತಿಭಟನೆಗಳನ್ನು ನಡೆಸಲು ಜನರನ್ನು ಪ್ರಚೋದಿಸಲು ಮತ್ತು ಭಾರತ ವಿರೋಧಿ ಪ್ರಚಾರಕ್ಕಾಗಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಅಲ್ಲದೇ ಸಂಘಟನೆಗಳಿಗೆ ಹೊಸಬರನ್ನು ಸೇರಿಸಿಕೊಳ್ಳಲು ಇದೇ ಹಣವನ್ನು ಬಳಕೆ ಮಾಡಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

20ಕ್ಕೂ ಹೆಚ್ಚು ಖಲಿಸ್ತಾನಿ ಮತ್ತು ದರೋಡೆಕೋರರು ಕೆನಡಾದಲ್ಲಿ ಅಡಗಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ದೇಶದ ಇತರ ಏಜೆನ್ಸಿಗಳು ಕೆನಡಾಕ್ಕೆ ಪರಸ್ಪರ ಕಾನೂನು ಸಹಾಯ ಕೇಳಿದ್ದವು. ಆದರೆ ಕೆನಡಾದ ತನಿಖಾ ಸಂಸ್ಥೆಗಳು ತನಿಖೆಗೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ.

Leave a comment

Your email address will not be published. Required fields are marked *