September 14, 2026
#ಬೆಂಗಳೂರು

ಜನವರಿ 29ರಿಂದ ಬೆಂಗಳೂರಿನಲ್ಲಿ ಜಿಎಎಫ್‌ಎಕ್ಸ್ ಸಮ್ಮೇಳನ

ಬೆಂಗಳೂರು:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನವರಿ 29 ರಿಂದ ಗೇಮಿಂಗ್ ಮತ್ತು ಅನಿಮೇಷನ್ ಸಮ್ಮೇಳನ ನಡೆಯಲಿದೆ ಎಂದು ಐಟಿ-ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರ ಮತ್ತು ಅಬೈ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ 10 ರಾಷ್ಟ್ರಗಳಿಂದ 32 ಅಂತಾರಾಷ್ಟ್ರೀಯ ಭಾಷಣಕಾರರು ಭಾಗಿಯಾಗುತ್ತಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಸಮ್ಮೇಳನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ರಾಮಮAದಿರಕ್ಕೆ ಜನರನ್ನು ಕರೆದುಕೊಂಡು ಹೋಗಲು ಬಿಜೆಪಿ ವ್ಯವಸ್ಥೆ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ರಾಮಮಂದಿರಕ್ಕೆ ಕರೆದೊಯ್ಯಲಿ. ತೀರ್ಥಯಾತ್ರೆ ತಾನೆ, ಸ್ವಲ್ಪ ಪ್ರಬುದ್ಧತೆ ಆದರು ಬರಲಿ. ಬಂಡವಾಳ ಬಯಲಾಗುತ್ತೆ. ರಾಜ್ಯ ಸರ್ಕಾರದಿಂದ ಅಯೋಧ್ಯೆಗೆ ಕರೆದುಕೊಂಡು ಹೋಗುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು.
ರಾಮಮಂದಿರದ ಬಗ್ಗೆ ನಾವು ಎಲ್ಲಿ ಪ್ರಶ್ನೆ ಮಾಡಿದ್ದೇವೆ? ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಏಕೆ? ಅಂತ ಸಾಧು ಸಂತರು ಕೇಳಿದ್ದಾರೆ, ನಾವು ಕೇಳಿದ್ದಲ್ಲ. ನಾನು ಯಾವ ದೇವಾಲಯಕ್ಕೂ ಹೋಗುವುದಿಲ್ಲ. ಯಾರಾದರೂ ಬನ್ನಿ ಪ್ರಿಯಾಂಕ್ ಅಂದರೇ ಬರುತ್ತೇನೆ. ಯಾರಾರೂ ಕರೆದುಕೊಂಡು ಹೋದರೆ ಹೋಗುತ್ತೇನೆ. ಕಲಿಯಲು ಹೋದರೆ ತಪ್ಪೇನು? ನಾನು ಜನತಾ ಜನಾರ್ದನ ಭಕ್ತ. ನಾನು ಬಸವ, ಸಂವಿಧಾನ ಮತ್ತು ಅಂಬೇಡ್ಕರ್ ತತ್ವ ನಂಬಿದವನು. ನನಗೆ ಭಕ್ತಿ ಇಲ್ಲ, ಏನು ಮಾಡಲಿ ಎಂದರು.
ಬಿಜೆಪಿಯ ಎಷ್ಟು ಜನ ಶಾಸಕರು ರಾಮಾಯಣ ಓದಿದ್ದಾರೆ? ಎಷ್ಟು ಜನರಿಗೆ ಹನುಮಾನ್ ಚಾಲೀಸಾ ಬರುತ್ತದೆ? ನಾನು ಋಷಿಕೇಶ, ಬನಾರಸ್ ಎಲ್ಲಾ ಕಡೆ ಹೋಗಿದ್ದೇನೆ. ನಾನು ನಂಬಿರುವುದು ಬಸವ ತತ್ವ, ಅಂಬೇಡ್ಕರ್ ತತ್ವ ಮತ್ತು ಸಂವಿಧಾನ ತತ್ವ. ನನಗೆ ಭಕ್ತಿ ಇಲ್ಲ ಏನು ಮಾಡಲಿ. ನೀವು ಯಾರಾದರೂ ಅಯೋಧ್ಯೆಗೆ ಕರೆದುಕೊಂಡು ಹೋದರೆ ಅಧ್ಯಯನ ಮಾಡಲು ಬರುತ್ತೇನೆ ಎಂದು ಸ್ಪಷ್ಟಪಡಿಸಿದರು.

Leave a comment

Your email address will not be published. Required fields are marked *