July 29, 2026
#ಜಿಲ್ಲೆ

ಅರಣ್ಯ ಭೂಮಿ ಒತ್ತುವರಿ ತೆರವು ವಿಚಾರ – ಪ್ರಭಾವಿಗಳ ಜಾಗ ತೆರವು ಯಾವಾಗ ಎಂದ ಬಿಜೆಪಿ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ರಾಜಕೀಯ ಫೈಟ್‍ಗೆ ಕಾರಣವಾಗಿದೆ. ಈಗಾಗಲೇ 1050 ಎಕರೆಯಷ್ಟು ಅರಣ್ಯ ಭೂಮಿಯನ್ನು ತೆರವು ಗೊಳಿಸಲಾಗಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೇರಿದ ಅರಣ್ಯ ಭೂಮಿ ಒತ್ತುವರಿ ತೆರವು ಮಾಡದೆ, ಸಣ್ಣ ರೈತರ ಭೂಮಿ ತೆರವುಗೊಳಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ವಿಚಾರಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಣ್ಣ ರೈತರ ಜಮೀನನ್ನು ಮಾತ್ರ ತೆರವು ಮಾಡಿರುವ ಅರಣ್ಯ ಇಲಾಖೆ ಪ್ರಭಾವಿಗಳ ಜಮೀನನ್ನು ತೆರವು ಮಾಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. 

ಅಲ್ಲದೇ ರೈತರ ಜಮೀನುಗಳನ್ನು ತೆರವುಗೊಳಿಸದಂತೆ ಆಗ್ರಹಿಸಿ ಒಂದೆಡೆ ಹೋರಾಟ ನಡೆಯುತ್ತಿದೆ. ಆದರೂ ಭೂಮಿ ಒತ್ತುವರಿ ತೆರವು ಮುಂದುವರೆದಿದೆ. ತೆರವು ಕಾರ್ಯಾಚರಣೆ ವೇಳೆ ರೈತರು ಬೆಳೆದ ಬೆಳೆಗಳು ಹಾಗೂ ಮಾವಿನ ಮರಗಳನ್ನು ಅರಣ್ಯ ಇಲಾಖೆ ನಾಶ ಮಾಡಿದೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಅದರಂತೆ ಶ್ರೀನಿವಾಸಪುರದ ಮಾಜಿ ಶಾಸಕ ರಮೇಶ್ ಕುಮಾರ್ ಅವರ ಅರಣ್ಯ ಭೂಮಿ ಯಾಕೆ ತೆರವುಗೊಳಿಸಿಲ್ಲ? ಅವರ 151 ಎಕರೆ ಅರಣ್ಯ ಭೂಮಿಯನ್ನು ಅಧಿಕಾರಿಗಳು ಮುಟ್ಟಿಲ್ಲ ಎಂದು ಬಿಜೆಪಿ ನಾಯಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೇರ ಸವಾಲು ಹಾಕಿದ್ದಾರೆ. ಸರ್ಕಾರವೇ ಕಂದಾಯ ಇಲಾಖೆ ಮುಖಾಂತರ ಭೂಮಿಗಳನ್ನು ಮಂಜೂರು ಮಾಡಿ ಈಗ ಸರ್ಕಾರವೇ ಅದನ್ನು ರೈತರಿಂದ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ರೈತರಿಗಾಗಿ ಜೈಲಿಗೆ ಹೋಗಲು ತಯಾರಿದ್ದೇವೆ. ಪ್ರಾಣ ತ್ಯಾಗಕ್ಕೂ ಸಿದ್ಧ ಎನ್ನುವ ಮೂಲಕ ಬೃಹತ್ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.

ಇದಕ್ಕೆ ರಮೇಶ್ ಕುಮಾರ್ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಹಾಗೂ ರಮೇಶ್ ಅವರ ಬಗ್ಗೆ ಅನಾವಶ್ಯಕ ಮಾತನಾಡಬಾರದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಒಟ್ಟಾರೆ ಅರಣ್ಯ ಭೂಮಿ ಒತ್ತುವರಿ ವಿಚಾರ ಎರಡೂ ಪಕ್ಷಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.

Leave a comment

Your email address will not be published. Required fields are marked *