ಅಂಗಡಿ, ಮಾಲ್ಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕಶೀಘ್ರವೇ ಸುಗ್ರೀವಾಜ್ಞೆ
ಬೆಂಗಳೂರು:
ಅಂಗಡಿ, ಮಾಲ್ಗಳ ನಾಮಫಲಕಗಳು ಕನ್ನಡ ಭಾಷೆಯಲ್ಲೇ ಇರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.
ಅAಗಡಿ ಮುಗ್ಗಟ್ಟುಗಳ ಮುಂಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸುವ ಸಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಗೃಹ ಸಚಿವ ಪರಮೇಶ್ವರ್, ಬಿಬಿಎಂಪಿ, ಗೃಹ ಇಲಾಖೆ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಧಿವೇಶನ ಇಲ್ಲದೆ ಇರುವುದರಿಂದ ಸುಗ್ರಿವಾಜ್ಞೆ ಹೊರಡಿಸುತ್ತಿದ್ದೇವೆ. ಫೆಬ್ರವರಿ ೨೮ರ ಒಳಗೆ ೬೦% ಕನ್ನಡ ಫಲಕ ಇರಬೇಕು. ಇದಲ್ಲದೆ ಸಾರ್ವಜನಿಕರಿಗೆ ನೀಡುವ ಮಾಹಿತಿ ಮತ್ತು ಜಾಹಿರಾತುಗಳನ್ನು ಕನ್ನಡದಲ್ಲಿ ಇರಬೇಕು. ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಸರ್ಕಾರ ನಿಗದಿ ಮಾಡಲಿದೆ. ಕನ್ನಡ ಆಡಳಿತ ಭಾಷೆ. ಇದರಲ್ಲಿ ನಾವು ಯಾವುದೇ ರಾಜಿ ಮಾಡುವುದಿಲ್ಲ ಎಂದರು.
ಬಿಜೆಪಿ ಅವಧಿಯಲ್ಲಿ ೨೦೨೨ ರಲ್ಲಿ ಪಾಸ್ ಆಗಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಸೆಕ್ಷನ್ ೧೭(೬) ರಲ್ಲಿ ನಾಮಫಲಕಗಳು ಅರ್ಧದಷ್ಟು ಕನ್ನಡ ಭಾಷೆ ಕೆಳಭಾಗದ ಅರ್ಧ ಬೇರೆ ಭಾಷೆಯಲ್ಲಿ ಇರಬೇಕು ಅಂತ ಎರಡು ಸದನದಲ್ಲಿ ಕಾಯ್ದೆ ಪಾಸ್ ಆಗಿ ರಾಜ್ಯಪಾಲರ ಅಂಕಿತ ಕೂಡಾ ಆಗಿತ್ತು. ಆದರೆ ಅರ್ಧ ಭಾಗ ಮಾತ್ರ ಕನ್ನಡ ಇರಬೇಕು ಎಂಬ ನಿಯಮದ ಬದಲಾಗಿ,ಸಿದ್ದರಾಮಯ್ಯ ಸರ್ಕಾರ ೨೦೧೮ ರಲ್ಲಿ ಹೊರಡಿಸಿದ್ದ ಸುತ್ತೋಲೆ ಅನ್ವಯ ೬೦%ಕನ್ನಡ ನಾಮ ಫಲಕ, ೪೦% ಇತರೇ ಭಾಷೆ ಬಳಕೆ ನಿಯಮವನ್ನೇ ಜಾರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬAಧ ತಿದ್ದುಪಡಿ ನಿಯಮಕ್ಕೆ ಸುಗ್ರಿವಾಜ್ಞೆ ಹೊರಡಿಸಲು ಸಿಎಂ ಸೂಚನೆ ನೀಡಿದ್ದಾರೆ. ಎರಡು ಸದನದಲ್ಲಿ ಮಸೂದೆ ಪಾಸ್ ಆಗಿ ರಾಜ್ಯಪಾಲರ ಸಹಿ ಹಾಕಿದ್ದಾರೆ. ಆದರೆ ಇನ್ನೂ ನಿಯಮ ಮಾಡಿಲ್ಲ. ಹೀಗಾಗಿ ಕೂಡಲೇ ರೂಲ್ಸ್ ಫ್ರೇಮ್ ಮಾಡಲು ಸೂಚನೆ ನೀಡಿದ್ದೇನೆ. ನಿಯಮ ಸೇರಿಸಿದ ನಂತರ ಒಂದೆರಡು ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸುಗ್ರಿವಾಜ್ಞೆ ಜಾರಿ ಆಗಲಿದ್ದು, ೬೦% ಕಡ್ಡಾಯ ನಾಮ ಫಲಕ ನಿಯಮ ಅಧಿಕೃತವಾಗಿ ಜಾರಿ ಆಗಲಿದೆ. ಇದೇ ಅಲ್ಲದೆ ಸಾರ್ವಜನಿಕರ ಮಾಹಿತಿಗೆ ನೀಡುವ ಜಾಹಿರಾತು ಮತ್ತು ಸೂಚನಾ ಫಲಕಗಳು ಕೂಡಾ ಕನ್ನಡದಲ್ಲಿ ಇರಬೇಕು ಎಂಬ ನಿಯಮ ೨೦೨೨ರ ಕಾಯ್ದೆಯಲ್ಲಿ ಇದೆ. ಎಷ್ಟು ಪ್ರಮಾಣದಲ್ಲಿ ಕನ್ನಡದಲ್ಲಿ ಮಾಹಿತಿ ಇರಬೇಕು ಅಂತ ಸರ್ಕಾರ ನಿರ್ಧಾರ ಮಾಡಲಿದೆ ಅಂತ ಸಿದ್ದರಾಮಯ್ಯ ತಿಳಿಸಿದರು.
ಕರವೇ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರತಿಭಟನೆ ಮಾಡಲು ಅವಕಾಶ ಇದೆ. ಆದರೆ ಯಾರು ಕಾನೂನು ಕೈಗೆ ಎತ್ತಿಕೊಳ್ಳಬಾರದು. ಯಾರೇ ಕಾನೂನು ಕೈಗೆ ಎತ್ತುಕೊಂಡರೆ ಸರ್ಕಾರ ಸಹಿಸುವುದಿಲ್ಲ. ನಮ್ಮ ಸರ್ಕಾರ ಕನ್ನಡದ ಪರ ಇದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಇದರಲ್ಲಿ ಯಾವುದೇ ರಾಜೀ ಇಲ್ಲ ಅಂತ ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವುದರಿದ್ದರೆ ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಮಾಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿದೆ. ರಾಜ್ಯ ಸರ್ಕಾರ ಇದರ ಪಾಲನೆಗೆ ಕ್ರಮ ತೆಗೆದುಕೊಳ್ಳಬೇಕು ಅಂತ ಸೂಚನೆ ನೀಡಿದೆ. ಕೋರ್ಟ್ ಆದೇಶ ಇದ್ದರೂ ಸಾರ್ವಜನಿಕ ಹಿತ, ರಾಜ್ಯದ ಹಿತಕ್ಕೆ ಪ್ರತಿಭಟನೆ ಮಾಡಿದರೆ ವಿರೋಧ ಮಾಡುವುದಿಲ್ಲ. ಶಾಂತಿಯುತ ಪ್ರತಿಭಟನೆ ಮಾಡಬೇಕು. ಆದರೆ ಕಾನೂನು ಕೈಗೆ ಎತ್ತುಕೊಂಡರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.













































































































































































































































































































































































































































































































































































































































































































































































































































































































































































































































































































































