ರಾಮನಗರವನ್ನು ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡ್ತೀನಿ: ಡಿಕೆಶಿ
ರಾಮನಗರ: ಇನ್ಮುಂದೆ ರಾಮನಗರ ಜಿಲ್ಲೆ ಇರೋದಿಲ್ಲ, ಇದನ್ನು ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕನಕಪುರದ ವೀರಭದ್ರಸ್ವಾಮಿ ದೇವಸ್ಥಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ಮುಂದೆ ರಾಮನಗರ ಜಿಲ್ಲೆ ಇರೋದಿಲ್ಲ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಯಾರೋ ಹೆಸರು ಮಾಡಿಕೊಳ್ಳಬೇಕು ಅಂತಾ ರಾಮನಗರ ಜಿಲ್ಲೆ ಮಾಡಿದ್ರು. ಮತ್ತೆ ರಾಮನಗರವನ್ನು ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡುತ್ತೇನೆ ಎಂದರಲ್ಲದೇ ರಾಮನಗರ ಇಲ್ಲ.. ಬೆಂಗಳೂರು ಅಷ್ಟೇ ಎಂದು ದೇವರ ಮೇಲೆ ಪ್ರಮಾಣ ಮಾಡಿದ್ದಾರೆ.
ಇದೇ ವೇಳೆ ರೈತರು ಭೂಮಿ ಮಾರಾಟ ಮಾಡದಂತೆ ತಾಕೀತು ಮಾಡಿದ ಡಿಕೆಶಿ, ಒಂದೊಂದು ಅಡಿ ಲೆಕ್ಕದಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತೆ. ನೀವು ರಾಮನಗರದವರಲ್ಲ, ನೀವು ಬೆಂಗಳೂರು ಜಿಲ್ಲೆಯವರು. ಸುಮ್ನೆ ನಮ್ಮನ್ನ ರಾಮನಗರ ಅಂತ ಹೇಳಿ ಮೂಲೆಗೆ ತಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಗ್ರಾಮಾಂತರನೂ ಅಲ್ಲ, ಬೆಂಗಳೂರು ಜಿಲ್ಲೆಯವರು. ದೇವರ ಸನ್ನಿಧಿಯಲ್ಲೀ ವಿಜಯದಶಮಿ ದಿನ ಈ ಮಾತನ್ನು ಹೇಳ್ತಿದ್ದೀನಿ, ಆ ಕೆಲಸ ಮಾಡೇ ಮಾಡುತ್ತೇನೆ. ರಾಮನಗರ ಬೆಂಗಳೂರು ಆಗುತ್ತೆ. ರೈತರು ಯಾರೂ ಭೂಮಿಯನ್ನು ಮಾರಾಟ ಮಾಡ್ಬೇಡಿ ಎಂದು ಕರೆ ನೀಡಿದ್ದಾರೆ.








































































































































































































































































































































































































































































































































































































































































































































































































































































































































































































































































































































