September 13, 2026
#ಬೆಂಗಳೂರು

ಬೆಂಗಳೂರಿನ ಹಲವೆಡೆ ಇಂದು ಮದ್ಯ ನಿಷೇಧ

ಬೆಂಗಳೂರು: ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಏರಿಯಾ ಏರಿಯಾಗಳಲ್ಲಿ ಗಣೇಶ ಕೂರಿಸಿ ಅದ್ದೂರಿ ಪೂಜೆ ಮಾಡಿ, ಪ್ರಸಾದ ಹಂಚಿ ಡಿಜೆಗೆ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ್ದಾಗಿದೆ. ಸದ್ಯ ಪ್ರತಿಷ್ಟಾಪನೆ ಮಾಡಿದ್ದ ಗಣೇಶನಿಗೆ ಮೆರವಣಿಗೆ ಮೂಲಕ ವಿಸರ್ಜನೆ ಮಾಡುವ ಸಮಯ ಬಂದಿದೆ. ಇಂದು ಬೆಂಗಳೂರಿನ ಹಲವೆಡೆ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ಮದ್ಯ ನಿಷೇಧ ಹೇರಲಾಗಿದೆ. ಬೆಂಗಳೂರಿನ ಕೇಂದ್ರ, ಉತ್ತರ, ಪೂರ್ವ ಮತ್ತು ಈಶಾನ್ಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧ ವಿಧಿಸಲಾಗಿದೆ.

ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ನಡೆಯುವ ಗಲಾಟೆಗಳಿಗೆ ಬ್ರೇಕ್ ಹಾಕಲು ಎಲ್ಲಾ ಮದ್ಯದಂಗಡಿ, ಬಾರ್ & ರೆಸ್ಟೋರೆಂಟ್ ಮತ್ತು ವೈನ್ಸ್​ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ?

ಬೆಂಗಳೂರು ಕೇಂದ್ರ, ಉತ್ತರ, ಪೂರ್ವ, ಈಶಾನ್ಯ ವಿಭಾಗದಲ್ಲಿ ಮದ್ಯ ನಿಷೇಧ ಹೇರಲಾಗಿದೆ. ಬೆಂಗಳೂರು ಉತ್ತರ ವಿಭಾಗದ ಜೆ.ಸಿ.ನಗರ, ಆರ್.ಟಿ.ನಗರ, ಹೆಬ್ಬಾಳ, ಸಂಜಯ ನಗರದಲ್ಲಿ ಸೆಪ್ಟೆಂಬರ್ 21ರ ಬೆಳಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 22ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ.

ಪೂರ್ವ ವಿಭಾಗದ ಕೆ.ಜಿ. ಹಳ್ಳಿ, ಡಿ.ಜೆ.ಹಳ್ಳಿ, ಗೋವಿಂದಪುರ, ಬಾಣಸವಾಡಿ, ರಾಮಮೂರ್ತಿ ನಗರ, ಹೆಣ್ಣೂರು, ಭಾರತಿನಗರ, ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23ರ ಬೆಳಗ್ಗೆ 6ರಿಂದ ಸೆ.24ರ ಬೆಳಗ್ಗೆ 6ರವರೆಗೆ ಮದ್ಯ ನಿಷೇಧಿಸಲಾಗಿದೆ. ಹಾಗೂ ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಹಲಸೂರು ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 24ರ ಬೆಳಗ್ಗೆ 6ರಿಂದ ಸೆಪ್ಟೆಂಬರ್ 25ರ ಬೆಳಗ್ಗೆ 6 ಗಂಟೆವರಗೆ ಮದ್ಯ ಮಾರಾಟ ಬಂದ್ ಇರಲಿದೆ.

ಬೆಂಗಳೂರಿನ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ, ಯಲಹಂಕ, ಕೊಡಿಗೆಹಳ್ಳಿ, ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23ರ ಸಂಜೆ 6ರಿಂದ ಸೆ.25ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ನಿಷೇಧ ಹೇರಲಾಗಿದೆ.

ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಸೆ.30ರ ಬೆಳಗ್ಗೆ 6ರಿಂದ ಅಕ್ಟೋಬರ್ 1ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

Leave a comment

Your email address will not be published. Required fields are marked *