September 13, 2026
#ಜಿಲ್ಲೆ

ನಾನೂ ರಾಮಭಕ್ತ, ಇದರಲ್ಲಿ ರಾಜಕೀಯ ಬೇಡ

ರಾಮನಗರ:
ಅತ್ತ ರಾಮಮಂದಿರ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಧರ್ಮಯುದ್ಧ ನಡೆಯುತ್ತಿದ್ದರೆ ಇತ್ತ ರಾಮನಗರದ ಕೈ ಶಾಸಕರೊಬ್ಬರು ರಾಮೋತ್ಸವದ ಜಪ ಮಾಡಿದ್ದಾರೆ. ನಾನು ಕೂಡಾ ರಾಮಭಕ್ತ, ನಾನು ರಾಮನನ್ನು ಪೂಜೆ ಮಾಡ್ತೀನಿ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.
ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎಂಬ ಕುರಿತು ಮಾತನಾಡಿದ ಅವರು, ರಾಮನಗರದಲ್ಲಿ ರಾಮೋತ್ಸವವನ್ನ ನಡೆಸಬೇಕು ಅಂತ ಚಿಂತನೆ ಮಾಡಿದ್ವಿ. ಅದನ್ನ ಭಕ್ತಿ ಪೂರ್ವಕವಾಗಿ ಮಾಡಿಯೇ ಮಾಡ್ತೀವಿ. ನಾನೂ ರಾಮನ ಭಕ್ತ, ನಾನು ಎಲ್ಲಾ ದೇವರನ್ನ ಪೂಜಿಸ್ತೇನೆ ಎಂದರು.
ನಾನು ಚಿಕ್ಕವಯಸ್ಸಿನಿಂದಲೇ ಎಲ್ಲಾ ದೇವರ ಪೂಜೆ ಮಾಡಿದ್ದೇನೆ. ಹಾಗೆಯೇ ರಾಮನ ಪೂಜೆಯನ್ನೂ ಮಾಡುತ್ತೇನೆ. ರಾಮಮಂದಿರ ವಿಚಾರವನ್ನ ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು. ಆದರೆ ನಾವು ಇದನ್ನ ರಾಜಕೀಯವಾಗಿ ಬಳಸಿಕೊಳ್ಳಲ್ಲ. ಜನರನ್ನ ಒಡೆದು ಕೆಲವರು ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ಆದರೆ ಕಾಂಗ್ರೆಸ್ ಗೆ ತನ್ನದೇ ಆದ ಬದ್ಧತೆ, ಸಿದ್ದಾಂತ ಇದೆ ಎಂದು ಶಾಸಕರು ಹೇಳಿದರು.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಾಡ್ತಿದ್ದಾರೋ ಇಲ್ವೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿರೋ ವಿಚಾರ. ಆದರೆ ನಾವು ರಾಮನನ್ನ ಮನೆ ದೇವರು ಅಂತ ಪೂಜೆ ಮಾಡ್ತೀವಿ. ಅವರಿಗೆ ರಾಮನ ಪೂಜೆ ಹೊಸದಿರಬಹದು, ಆದರೆ ನಮಗೆ ಹೊಸದೇನಲ್ಲ. ಅದಕ್ಕಾಗಿ ರಾಜಕಾರಣಕ್ಕೆ ಬಳಸಿಕೊಳ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದ್ರು.

Leave a comment

Your email address will not be published. Required fields are marked *