July 29, 2026
#ಜಿಲ್ಲೆ

ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ರೈತ ಮುಖಂಡರ ಆಕ್ರೋಶ

ಬೆಳಗಾವಿ: ಬರಗಾಲ ಬರಲಿ ಎಂದು ರೈತರಿಗೆ ಆಸೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ‘ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ರೈತ ಮುಖಂಡ ಮಹಾದೇವ ಮಡಿವಾಳ ಹಾಗೂ ಮಂಜುನಾಥ ಪರಗೌಡ  ಮಾತನಾಡಿ ‘ನೀವು ರೈತನ ಮಕ್ಕಳು ಎಂದು ಚುನಾವಣೆ ಸಂದರ್ಭದಲ್ಲಿ ಹೇಳುತ್ತೀರಿ, ನೀವು ರೈತರ ಮಕ್ಕಳಲ್ಲ, ಬರಗಾಲ ಬರಲಿ ಎಂದು ನಿಮ್ಮ ತಂದೆ ಬಯಸಿದ್ರಾ ಎಂದು ಕೇಳಿಕೊಳ್ಳಿ ಎಂದು ಕಿಡಿಕಾರಿದ್ದಾರೆ.

ದೇವರು ಕೊಟ್ಟ ಕೃಷ್ಣ ನದಿ ಪುಕ್ಕಟ್ಟೆ ಎಂದು ಹೇಳುತ್ತೀರಾ, ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡಿಸಿಕೊಂಡು ಬರುವ ತಾಕತ್ ನಿಮಗೆ ಇಲ್ಲ. ಇಂತಹ ಉಡಾಫೆ ಹೇಳಿಕೆ ಕೊಟ್ಟರೆ ತಕ್ಕ ಪಾಠ ಕಲಿಸುತ್ತೇವೆ. ನೀವು ಎಂಎಲ್‌ಎ ಎಲೆಕ್ಷನ್‌ಗೆ ನಿಲ್ಲು ಎಂದು ಯಾರಾದರೂ ಹೇಳ್ತಾರಾ?, ನಮ್ಮಿಂದ ನೀವು, ನಿಮ್ಮಿಂದ ನಾವಲ್ಲ. ಹೇಳಿಕೆ ಹಿಂದೆ ತಗೆದುಕೊಳ್ಳದಿದ್ರೆ ಉಗ್ರ ಹೋರಾಟ ಮಾಡ್ತೀವಿ ಎಂದು ರೈತ ಮುಖಂಡ ಮಹಾದೇವ ಮಡಿವಾಳ ವಾರ್ನ್​ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಬರ ತಾಂಡವವಾಡಿ ರೈತರ ಸ್ಥಿತಿ ಚಿಂತಾಜನಕ ಆಗಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರೈತರನ್ನು ಕಡೆಗಣಿಸುವ ಮಾತು ಆಡಿದ್ದಾರೆ. ಈ ಹಿಂದೆ ರೈತರ ಆತ್ಮಹತ್ಯೆ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ರು, ಸಚಿವರು ಜನ, ರೈತರ ಪರ ಕೆಲಸ ಮಾಡಬೇಕು. ರೈತರ ಕಷ್ಟ ಆಲಿಸಬೇಕು, ನಿಮಗೆ ನಾವೆಲ್ಲರೂ ಸೇರಿ ದುಡ್ಡು ಕೊಡ್ತೀವಿ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದು, ಸ್ವಲ್ಪ ಆದರೂ ನಾಚಿಕೆ ಎನ್ನುವುದು ಇರಬೇಕು ನಿಮಗೆ ಎಂದು ರೈತ ಮುಖಂಡ ಮಂಜುನಾಥ ಪರಗೌಡ ಕಿಡಿಕಾರಿದ್ದಾರೆ.

Leave a comment

Your email address will not be published. Required fields are marked *