September 14, 2026
#ಬೆಂಗಳೂರು

ಕರ್ನಾಟಕದಲ್ಲಿ ತುಘಲಕ್ ಸರ್ಕಾರ

ಬೆಂಗಳೂರು:
ಕರ್ನಾಟಕದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ. ಅದಕ್ಕಾಗಿ ಸರ್ಕಾರ ಕರ ಸೇವಕರ ಬಂಧನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಕರ ಸೇವಕರ ಬಂಧನ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುತ್ತಿಲ್ಲ. ಇದು ತುಘಲಕ್ ದರ್ಬಾರ್ ಸರ್ಕಾರ. ಸದ್ದಾಂ ಹುಸೇನ್ ತರಹ ಆಡಳಿತ ಮಾಡುತ್ತಿದ್ದಾರೆ. ೩೧ ವರ್ಷದ ಕೇಸ್ ಈಗ ರೀ ಓಪನ್ ಮಾಡುತ್ತಾರೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಜನ ಖುಷಿ ಪಡುತ್ತಿದ್ದಾರೆ. ಈ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಕರ ಸೇವಕರ ಬಂಧನ ಮಾಡಿದ್ದಾರೆ. ಅವರೇನು ಕೊಲೆ ಮಾಡಿದ್ರಾ, ಲೂಟಿ ಮಾಡಿದ್ರಾ? ದೌರ್ಜನ್ಯ ಮಾಡಿದ್ರಾ? ಈ ಕಾಂಗ್ರೆಸ್ ಸರ್ಕಾರ ಸೇಡಿನ ಸರ್ಕಾರ. ರಾಜ್ಯದ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದ್ದಾರೆ ಎಂದು ಆಂಜನೇಯ ಹೇಳುತ್ತಾರೆ. ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಆಂಜನೇಯ ಹೀಗೆ ಮಾತನಾಡುತ್ತಿದ್ದಾರೆ. ಆಂಜನೇಯ ನೀವು ಆಂಜನೇಯ ಅಲ್ಲ ರಾವಣಾಸುರ. ದೇಶದ ಸಂಸ್ಕೃತ ಕಲೆ ಉಳಿಯಬೇಕು ಎಂಬ ಸಾವಿರಾರು ವರ್ಷಗಳ ಕನಸು ರಾಮ ಮಂದಿರ. ಕಾಂಗ್ರೆಸ್ ಅವಧಿಯಲ್ಲಿ ಸಂಘರ್ಷಗಳು ಆಗಿದ್ದವು. ಎಷ್ಟು ಕರ ಸೇವಕರನ್ನು ಕಾಂಗ್ರೆಸ್ ಜೈಲಿಗೆ ಕಳಿಸಿತ್ತು. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇತ್ಯರ್ಥ ಆಗಿದೆ. ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ಇದು ಕಾಂಗ್ರೆಸ್‌ಗೆ ತಡೆಯಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ್ ಉದ್ಧಟತನದ ಹೇಳಿಕೆ ಕೊಡುತ್ತಾರೆ. ಗೋದ್ರಾ ಘಟನೆಗೆ ಮೋದಿ ಬಿಜೆಪಿ ಕಾರಣ ಅಲ್ಲ. ಕಾಂಗ್ರೆಸ್ ಕಾರಣ. ಕಾಂಗ್ರೆಸ್‌ನ ವಿಕೃತ ಮನಸ್ಸು ಇದಕ್ಕೆ ಕಾರಣ. ಕಾಂಗ್ರೆಸ್‌ಗೆ ಹತಾಶೆ ಮನೋಭಾವನೆ ಕಾಡುತ್ತಿದೆ. ರಾಮ ಮಂದಿರ ಕಟ್ಟಿರೋದು ಸಹಿಸೋಕೆ ಆಗುತ್ತಿಲ್ಲ. ಹರಿಪ್ರಸಾದ್ ಕಾಂಗ್ರೆಸ್‌ನಲ್ಲಿ ಸಂಪೂರ್ಣವಾಗಿ ತಿರಸ್ಕಾರವಾಗಿದ್ದಾರೆ. ಮಂತ್ರಿ ಆಗಬೇಕಿತ್ತು, ಆಗಲಿಲ್ಲ. ಹತಾಶೆ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಬಿಜೆಪಿ, ಮೋದಿ, ರಾಮನನ್ನ ಬೈದರೆ ಮತ್ತೆ ಚಾಲ್ತಿ ನಾಣ್ಯವಾಗಿ ಮಂತ್ರಿ ಆಗಬಹುದು ಎಂದು ಹೀಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯಗೂ ಹರಿಪ್ರಸಾದ್‌ಗೂ ಸಂಘರ್ಷ ಇದೆ. ಈ ಹೇಳಿಕೆಗಳಿಂದ ಸಿದ್ದರಾಮಯ್ಯ ಸರ್ಕಾರ ಪತನ ಆಗಲಿ ಎಂದು ಇಂತಹ ಮಾತು ಆಡುತ್ತಿದ್ದಾರೆ ಎಂದರು.
ಲೋಕಸಭೆಯಲ್ಲಿ ಎರಡು ಬಾರಿ ಕಾಂಗ್ರೆಸ್‌ಗೆ ಅಡ್ರೆಸ್ ಇರಲಿಲ್ಲ. ಇದೇ ರೀತಿ ಟೀಕೆ ಮಾಡಿದರೆ ಮತ್ತೆ ಜನ ನಿಮ್ಮನ್ನು ತಿರಸ್ಕಾರ ಮಾಡುತ್ತಾರೆ. ಜನ ನಿಮಗೆ ಪಾಠ ಕಲಿಸೋಕೆ ಕಾಯುತ್ತಿದ್ದಾರೆ. ಯಾವುದೋ ಕಾರಣಕ್ಕೆ ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ೩ ರಾಜ್ಯದಲ್ಲಿ ಸೋತರು. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ೧೦ ಸಾವಿರ ಘೋಷಣೆ ಮಾಡಿ ೧ ಸಾವಿರ ರಿಲೀಸ್ ಮಾಡಿದ್ದಾರೆ. ಟಿಪ್ಪು, ಮಹಮ್ಮದ್ ಘಜ್ನಿ, ಬಾಬರ್, ಸದ್ದಾಂ ಹುಸೇನ್ ಹೇಳುವುದಕ್ಕೆ ಸಿದ್ದರಾಮಯ್ಯ ಲಾಯಕ್. ಮುಂದಿನ ಲೋಕಸಭೆಯಲ್ಲಿ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a comment

Your email address will not be published. Required fields are marked *