May 30, 2026
#Uncategorized

ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಪರಾರಿ


ರಾಯಚೂರು: ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಬದ್ರಿನಾಥ ಕಾಲೋನಿಯಲ್ಲಿ ನಡೆದಿದೆ.

ಶಿಲ್ಪಾ (28) ಮೃತ ಮಹಿಳೆ. ಈಕೆ ಮನೆಯ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತಳ ಪತಿ ಶರತ್ ಹಾಗೂ ಅತ್ತೆ-ಮಾವ ಸೇರಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಶಿಲ್ಪಾ ಸಂಬಂಧಿಕರು ಆರೋಪಿಸಿದ್ದಾರೆ. 

ಘಟನೆ ಹಿನ್ನೆಲೆ ಆಕ್ರೋಶದಲ್ಲಿ ಶರತ್ ತಂದೆಗೆ ಶಿಲ್ಪಾ ಸಂಬಂಧಿಕರು ಥಳಿಸಿದ್ದಾರೆ. ಮಂಗಳವಾರ ರಾತ್ರಿ ಜಗಳ ಮಾಡಿ ಎರಡನೇ ಮಹಡಿಯಿಂದ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. 2022ರ ಜೂನ್‌ನಲ್ಲಿ ಆಂಧ್ರಪ್ರದೇಶ ಆದೋನಿಯಲ್ಲಿ ಶಿಲ್ಪಾ ಹಾಗೂ ಶರತ್ ಮದುವೆಯಾಗಿತ್ತು. ಮದುವೆಯಾದಾಗಿನಿಂದಲೂ ಪತಿ-ಪತ್ನಿ ನಡುವೆ ಹೊಂದಾಣಿಕೆಯಾಗದೇ ಆಗಾಗ ಜಗಳಗಳು ನಡೆಯುತ್ತಿದ್ದವು. ಈ ಕುರಿತು ಕುಟುಂಬದ ಹಿರಿಯರು ಸಂಧಾನ ಮಾಡಿದ್ದರು. ಆದರೂ ಕೂಡ ಸಮಸ್ಯೆಗಳು ಬಗೆಹರಿದಿರಲಿಲ್ಲ ಎಂದು ಆಂಧ್ರ ಮೂಲದ ಶಿಲ್ಪಾ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಘಟನೆಯ ಬಳಿಕ ಶಿಲ್ಪಾ ಪತಿ ಶರತ್ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಪತಿ ಬರುವವರೆಗೂ ಆಕೆಯ ಮೃತದೇಹ ಎತ್ತಲು ಬಿಡಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ. 

Leave a comment

Your email address will not be published. Required fields are marked *