ಕಾವೇರಿ ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂನು ಕ್ರಮ
ಬೆಂಗಳೂರು: ಕಾವೇರಿ ನೀರಿಗಾಗಿ ಹೋರಾಟ ಮಾಡುವವರು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ (Supreme Court) ತೀರ್ಪಿನಿಂದ ಮಂಡ್ಯ ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಆಗ್ತಿದೆ. ಪ್ರತಿಭಟನೆ ಮಾಡೋದು ಅವರ ಹಕ್ಕು. ಆದರೆ ಪ್ರತಿಭಟನೆ ವೈಲೆಂಟ್ ಆಗಬಾರದು. ಅಹಿತಕರ ಘಟನೆ ಆದ್ರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ತಮಿಳುನಾಡಿಗೆ ನೀರು ಬಿಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿದ ಸಚಿವರು, ಸುಪ್ರೀಂ ಕೋರ್ಟ್ ತೀರ್ಪು ಸರ್ಕಾರವನ್ನ ತೊಂದರೆಗೆ ಸಿಲುಕಿಸಿದೆ. ನಮ್ಮಲ್ಲಿ ನೀರೇ ಇಲ್ಲ. ಇಂತಹ ಸಮಯದಲ್ಲಿ ನಮ್ಮ ಅಹವಾಲನ್ನ ಸರಿಯಾದ ರೀತಿಯಲ್ಲಿ ನಾವು ಕೇಳಿದ್ವಿ. ನಮ್ಮ ಕಷ್ಟಗಳನ್ನ ಅರ್ಥ ಮಾಡಿಕೊಳ್ಳದ ತೀರ್ಪು ಇದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿತ್ತು. ಇದಕ್ಕೆ ಬೇಕಾದ ದಾಖಲಾತಿಗಳನ್ನ ನಮ್ಮ ವಕೀಲರು ಕೋರ್ಟ್ಗೆ ನೀಡಿದ್ದರು. KRS ಡ್ಯಾಂ ನಲ್ಲಿ 20 TMC ನೀರು ಇದೆ. 10 TMC ಡೆಡ್ ಸ್ಟೋರೇಜ್ ಹೊರತುಪಡಿಸಿದ್ರೆ, ಉಳಿಯೋದು 10 TMC ಮಾತ್ರ. ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡೋಕೆ ಸಾಧ್ಯವಿಲ್ಲ. ಬೆಳೆಗಳಿಗೆ, ಕುಡಿಯೋಕೆ ನೀರು ಇಲ್ಲ. ಕನಿಷ್ಠ ಪಕ್ಷ ಕುಡಿಯುವ ನೀರಿಗಾದ್ರು ಕೋರ್ಟ್ ಅವಕಾಶ ಕೊಡಬೇಕಾಗಿತ್ತು ಎಂದರು.
ನೀರು ಇದ್ದರೆ ಬಿಡಬಹುದು. ನೀರೇ ಇಲ್ಲದೆ ಬಿಡೋದು ಹೇಗೆ. ನಮಗೆ ಸಂಕಷ್ಟ ಸೂತ್ರವೇ ಇಲ್ಲ. ಸಂಕಷ್ಟ ಸೂತ್ರ ಮಾಡೋಕೆ ಯಾರಿಗೆ ಅಥಾರಿಟಿ ಇದೆಯೋ ಅದನ್ನ ಮಾಡಬೇಕು. ಹೀಗೆ ಆದ್ರೆ ಎಷ್ಟು ವರ್ಷ ಹೊಗೋದು. ಹೀಗಾಗಿ ಒಂದು ಸಂಕಷ್ಟ ಸೂತ್ರ ಇರಬೇಕು ಎಂದು ತಿಳಿಸಿದರು.

INDIA (ಇಂಡಿಯಾ) ಒಕ್ಕೂಟಕ್ಕಾಗಿ ಸರ್ಕಾರ ಕರ್ನಾಟಕದ ಹಿತ ಬಲಿಕೊಟ್ಟಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಹಿತ ಬಲಿ ಕೊಡಬೇಕಿದ್ರೆ ನೀರು ಬಿಟ್ಟು ಬಿಡಬೇಕಿತ್ತು. ನಾವು ಆ ರೀತಿ ಮಾಡಲಿಲ್ಲ. ಒಳ ಒಪ್ಪಂದ ಮಾಡಿಕೊಳ್ಳೋ ಅವಶ್ಯಕತೆಯೂ ನಮಗೆ ಇಲ್ಲ. ಅದು ಸಾಧ್ಯವೂ ಇಲ್ಲ. ಬಿಜೆಪಿ ಅವರು ರಾಜಕೀಯ ಲಾಭಕ್ಕೆ ನಮ್ಮ ಮೇಲೆ ಆರೋಪ ಮಾಡಬಹುದು. ನಮಗೆ ಅದರ ಅವಶ್ಯಕತೆ ಇಲ್ಲ ಎಂದರು.
ಇನ್ನು ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಿ ಸ್ಟಾಲಿನ್ಗೆ ಹೇಳಲಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೋನಿಯಾ ಗಾಂಧಿ ಅವರಿಗೆ ಏನು ಅಥಾರಿಟಿ ಇದೆ? ಸೋನಿಯಾ ಗಾಂಧಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ ಇದ್ದಿದ್ದರೆ ಅವರ ಕೈಯಲ್ಲಿ ಹೇಳಿಸಬಹುದಿತ್ತು. ಅವರ ಮಾತು ಯಾಕೆ ಸ್ಟಾಲಿನ್ ಕೇಳ್ತಾರೆ. ಕೇವಲ ರಾಜಕೀಯಕ್ಕಾಗಿ ಮಾತ್ರ ಅವರು ಹೀಗೆ ಆರೋಪ ಮಾಡ್ತಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಹಿತ ಕಾಪಾಡುತ್ತೇವೆ ಎಂದು ನುಡಿದರು.
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ, ನೀರಾವರಿ ಸಚಿವರು ದೆಹಲಿಯಲ್ಲಿ ಇದ್ದಾರೆ ಅವರು ಬಂದ ಮೇಲೆ ಚರ್ಚೆ ಮಾಡಿ ಏನ್ ಮಾಡೋದು ಅಂತ ತೀರ್ಮಾನ ಮಾಡ್ತೀವಿ ಎಂದು ಹೇಳಿದರು.












































































































































































































































































































































































































































































































































































































































































































































































































































































































































































































































































































































