September 14, 2026
#ಬೆಂಗಳೂರು

ಯಡಿಯೂರಪ್ಪ ಮನವೊಲಿಕೆ – ಉಪವಾಸ ಸತ್ಯಾಗ್ರಹ ವಾಪಸ್‌ ಪಡೆದ ಶಾಸಕ ಮುನಿರತ್ನ


ಬೆಂಗಳೂರು: ಶಾಸಕ ಮುನಿರತ್ನ ಅವರ ಪ್ರತಿಭಟನೆಗೆ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಮುನಿರತ್ನ ಅವರ ಮನವೊಲಿಸಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಸದ್ಯ ಶಾಸಕರು ತಮ್ಮ ಉಪವಾಸ ಧರಣಿಯನ್ನು ಹಿಂಪಡೆದಿದ್ದಾರೆ.

https://imasdk.googleapis.com/js/core/bridge3.595.0_en.html#goog_415539344

ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟ ಅನುದಾನ ರದ್ದುಪಡಿಸಿ ಸೇಡಿನ ರಾಜಕೀಯ ಮಾಡಿದ್ದಾರೆ. ನಾನು ಸಿಎಂ ಜೊತೆ ಮಾತನಾಡುತ್ತೇನೆ. ಸಿಎಂ ಜೊತೆ ಮಾತನಾಡಿ ಇದನ್ನು ಸರಿ ಮಾಡುತ್ತೇನೆ. ಇದು ಮೇಲ್ನೋಟಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಎಲ್ಲರಿಗೂ ಕೊಟ್ಟಂತೆ ಅನುದಾನ ಇವರಿಗೂ ಕೊಡಬೇಕು ನಾನು ಸಿಎಂ ಜೊತೆ ಮಾತನಾಡುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. 

ಬಿಎಸ್‌ವೈ ಭರವಸೆ ಹಿನ್ನೆಲೆ ಶಾಸಕರು ಧರಣಿ ಕೈಬಿಟ್ಟಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುನಿರತ್ನ, ಫಲಿತಾಂಶ ಬಂದಾಗಿನಿಂದ ನನ್ನ ಕ್ಷೇತ್ರದಲ್ಲಿ ಒಬ್ಬ ಶಾಸಕನಾಗಿ ಕೆಲಸ ಮಾಡೋದು ಕಷ್ಟ ಆಗುತ್ತಿದೆ. ಪೊಲೀಸ್ ದೌರ್ಜನ್ಯ, ಅಧಿಕಾರಿಗಳ ಅಮಾನತು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

126 ಕೋಟಿ ರೂ. ಅನುದಾನ ವಾಪಸ್ ಖಂಡಿಸಿ ಶಾಸಕ ಮುನಿರತ್ನ  ಹಾಗೂ ಅವರ ಬೆಂಬಲಿಗರು ಉಪವಾಸ ಧರಣಿ ನಡೆಸಿದ್ದರು. ಈ ಹಿನ್ನೆಲೆ ಮುನಿರತ್ನ ಅವರ ಪ್ರತಿಭಟನೆಗೆ ಅಡ್ಡಿಪಡಿಸಲು ಪೊಲೀಸರು ಪ್ಲಾನ್ ಮಾಡಿದ್ದು, ಹೆಚ್ಚುವರಿ ಪ್ರತಿಭಟನಾಕಾರರಿಗೆ ನಿರ್ಬಂಧ ಹಾಕಿದ್ದಾರೆ. 

ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಶಾಸಕ ಮುನಿರತ್ನ ಹಾಗೂ ಅವರ ಬೆಂಬಲಿಗರು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ವಿರುದ್ಧ ಬಿತ್ತಿಪತ್ರ ಹಿಡಿದು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ನಿಲ್ಲಿಸುವಂತೆ ಮುನಿರತ್ನ ಅವರ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಇದು ಶಾಂತಿಯುತ ಹಾಗೂ ಯಾರಿಗೂ ತೊಂದರೆ ಮಾಡದ ಪ್ರತಿಭಟನೆ. ನನ್ನ ಕ್ಷೇತ್ರಕ್ಕೆ ಅನ್ಯಾಯ ಆಗಿದೆ ಎಂದಿದ್ದಾರೆ. 

ಈ ಸಂದರ್ಭ ಪೊಲೀಸರು ಕಾರ್ಯಕರ್ತರನ್ನು ಬಲವಂತವಾಗಿ ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಅನ್ಯಾಯ, ಧಿಕ್ಕಾರ ಎಂದು ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಸಕರಿಗೆ ಪ್ರತಿಭಟನೆಗೆ ಅವಕಾಶ ಇದೆ. ಬೇರೆಯವರಿಗೆ ಇಲ್ಲ ಎಂದ ಪೊಲೀಸರು ಶಾಸಕರನ್ನು ಬಿಟ್ಟು ಉಳಿದವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಶಾಸಕ ಮುನಿರತ್ನ ಏಕಾಂಗಿಯಾಗಿ ಪ್ರತಿಭಟನೆ ಮುಂದುವರೆಸಿದ್ದರು. 

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸುಮಾರು 25 ಕ್ಕೂ ಹೆಚ್ಚು ಪ್ರತಿಭಟನಾ ನಿರತ ಮುನಿರತ್ನ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿರತ್ನ ಬೆಂಬಲಿಗರಿಗೆ ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ವಶಕ್ಕೆ ತೆಗೆದುಕೊಂಡಿದ್ದು, ಶಾಸಕ ಮುನಿರತ್ನ ನೀರು ಸಹ ಕುಡಿಯದೇ ಏಕಾಂಗಿಯಾಗಿ ಉಪವಾಸ ಧರಣಿ ಮುಂದುವರಿಸಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. 

Leave a comment

Your email address will not be published. Required fields are marked *