July 28, 2026
#ಜಿಲ್ಲೆ

ಹಿಂದೂ ಸಂಘಟನೆ ಅಧ್ಯಕ್ಷನ ಮೇಲೆ ರೌಡಿಶೀಟ್ ಕೇಸ್ ಓಪನ್!ಮಠಾಧೀಶರ ವ್ಯಾಪಕ ಆಕ್ರೋಶ

ಕಲಬುರಗಿ:
ಜಿಲ್ಲಾ ಹಿಂದೂ ಜಾಗೃತಿ ಸೇನಾ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಎಂಬುವವರ ಮೇಲೆ ಕೇವಲ ಒಂದು ಕೇಸ್ ದಾಖಲಾಗಿರುವುದಕ್ಕೆ ಕಲಬುರಗಿ ನಗರದ ಆರ್.ಜೆ ನಗರ ಠಾಣೆಯಲ್ಲಿ ರೌಡಿಶೀಟರ್‌ಕೇಸ್ ದಾಖಲಿಸಲಾಗಿದೆ. ಇದು ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಿವಿಧ ಮಠಾಧೀಶರು ಆಕ್ರೋಶ ಹೊರಹಾಕುತ್ತಿದ್ದಾರೆ.
ಅಷ್ಟಕ್ಕೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿ ಸಮಾಜದಲ್ಲಿ ಶಾಂತಿ ಕದಡಲು ಲಕ್ಷ್ಮಿಕಾಂತ್ ಯತ್ನಿಸಿದ್ದಾರೆಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇನ್ನೂ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ರೌಡಿಶೀಟರ್ ಫೈಲ್ ಓಪನ್ ಮಾಡಬೇಕು ಅಂದ್ರೆ ಆತನ ಮೇಲೆ ಮೂರಕ್ಕಿಂತ ಅಧಿಕ ಕೇಸ್‌ಗಳು ದಾಖಲು ಆಗಿರಬೇಕು. ಆದರೆ, ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಮೇಲೆ ಪಠಾಣ್ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಆರ್‌ಜೆ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಒಂದು ಕೆಸ್ ಹೊರೆತುಪಡಿಸಿದ್ರೆ ಲಕ್ಷ್ಮಿಕಾಂತ್ ಸ್ವಾದಿ ಮೇಲೆ ಯಾವುದೇ ಠಾಣೆಯಲ್ಲಿ ಯಾವುದೇ ರೀತಿಯ ಕೆಸ್‌ಗಳು ದಾಖಲಾಗಿಲ್ಲ. ಇಷ್ಟಿದ್ದರೂ ಸಹ ಲಕ್ಷ್ಮಿಕಾಂತ್ ಸ್ವಾದಿ ಮೇಲೆ ನಗರ ಪೊಲೀಸರು ಉದ್ದೇಶಪೂರ್ವಕವಾಗಿ ರೌಡಿಶೀಟ ಓಪನ್ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಎಫ್‌ಐಆರ್‌ನಲ್ಲಿ ಏನಿದೆ?
ಇನ್ನು ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಕಳೆದ ಕೆಲ ವರ್ಷಗಳಿಂದ ಹಿಂದೂ ಪರ ಹೋರಾಟಗಳನ್ನ ಮಾಡುತ್ತ ಬಂದಿದ್ದು, ಮೊನ್ನೆಯಷ್ಟೆ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಜನರಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆಂದು ಆರ್‌ಜೆ ನಗರ ಠಾಣೆ ಪೊಲೀಸರು ಸ್ವಾದಿಯನ್ನ ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರನ್ನ ಕಂಡ ತಕ್ಷಣ ಸ್ವಾದಿ ಪರಾರಿಯಾಗಿದ್ದಾರೆ ಎಂದು ಆರ್‌ಜೆ ನಗರ ಠಾಣೆ ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಕುರಿತು ಕಿಡಿಕಾರಿದ ಕೇದಾರ ಶ್ರೀಗಳು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಶಾಳ ಗ್ರಾಮದ ಕೇದಾರ ಶ್ರೀಗಳು, ‘ನಾವು ಕೂಡ ಧರ್ಮದ ಬಗ್ಗೆ ಅನೇಕ ಹೋರಾಟಗಳನ್ನ ಮಾಡಿದ್ದೇವೆ. ನಮ್ಮ ಮೇಲೂ ರೌಡಿಶೀಟರ್ ಕೇಸ್ ಹಾಕುತ್ತೀರಾ ಎಂದು ಕಿಡಿಕಾರಿದ್ದಾರೆ. ಧರ್ಮದ ಹೆಸರಲ್ಲಿ ಹೋರಾಟ ಮಾಡುತ್ತಿರುವ ಹಿಂದೂ ಜಾಗೃತಿ ಸೇನೆ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಮೇಲೆ ವಿನಾಕಾರಣ ರೌಡಿಶೀಟರ್ ಕೇಸ್ ಹಾಕಿ ಹಿಂದೂ ಧರ್ಮದ ಹೋರಾಟಗಳನ್ನ ಹತ್ತಿಕ್ಕುವ ಕೆಲಸ ನಡಿತಿದ್ದು, ಈ ಬಗ್ಗೆ ನಾವು ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅದೆನೇ ಇರಲಿ ಕಾಂಗ್ರೆಸ್ ಸರ್ಕಾರ ಬಂದಮೇಲೆ ಹಿಂದೂ ಸಂಘಟನೆಗಳ ಹೆಸರಿನ ಮೇಲೆ ಹೋರಾಟ ಮಾಡುವರನ್ನ ಕಟ್ಟಿಹಾಕುವ ಕೆಲಸ ನಡಿತ್ತಿರೋದು ಮೇಲ್ನೊಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಮಠಾಧೀಶರು ಸಹ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಅಖಾಡಕ್ಕೆ ಧುಮುಕ್ಕಿದ್ದಾರೆ. ಒಟ್ಟಿನಲ್ಲಿ ಲಕ್ಷ್ಮಿಕಾಂತ್ ಸ್ವಾದಿ ಮೇಲೆ ಯಾವುದೇ ಗಟ್ಟಿಯಾದ ಕಾರಣವಿಲ್ಲದೇ ರೌಡಿಶೀಟರ್ ದಾಖಲಿಸಿದ್ದು ಕಾಂಗ್ರೆಸ್ ಸರ್ಕಾರ ನಿಜಕ್ಕೂ ಹಿಂದೂ ಸಂಘಟನೆಗಳ ಮೇಲೆ ಸವಾರಿ ಮಾಡುತ್ತಿರುವುದಕ್ಕೆ ಪುಷ್ಟಿ ನೀಡಿದಂತಿದೆ.

Leave a comment

Your email address will not be published. Required fields are marked *