July 29, 2026
#ಬೆಂಗಳೂರು

ಕೇಂದ್ರದಿಂದ ರಾಜ್ಯಕ್ಕೆ ನೀಡಿದ 20 ವರ್ಷದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಆರ್.ಅಶೋಕ್

ಬೆಂಗಳೂರು: ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕರು ದೆಹಲಿ ಚಲೋಗೆ ಮುಂದಾಗಿದ್ದಾರೆ. ಹಾಗಾದರೆ ಕಳೆದ 20 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, 2004ರಿಂದ 2014ರವರೆಗೆ ಕರ್ನಾಟಕಕ್ಕೆ ಎಷ್ಟು ಹಣ ಬಂದಿದೆ. ಯುಪಿಎ ಸರ್ಕಾರದಲ್ಲಿ ಎಷ್ಟು ಹಣ ಬಂದಿದೆ ಎಂಬುದನ್ನು ಶ್ವೇತಪತ್ರ ಹೊರಡಿಸಿ. ಈಗ ಮೋದಿ ಅವರ ಅವಧಿಯಲ್ಲಿ 2014ರಿಂದ 2024 ರವರೆಗೆ ಎಷ್ಟು ಹಣ ಬಂದಿದೆ ಎಂಬುದನ್ನು ಶ್ವೇತಪತ್ರ ಹೊರಡಿಸಿ. ನಮಗಿಂತಲೂ ದೆಹಲಿ, ಮುಂಬೈ ಜಾಸ್ತಿ ತೆರಿಗೆ ಕಟ್ಟುತ್ತಾರೆ. 50 ವರ್ಷಗಳ ಹಿಂದೆ ಕೊಡಗು ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಕೂಗು ಎದ್ದಿತ್ತು. ನೀರು ಕೊಡುತ್ತೇವೆ. ಕಾಫಿ ಬೆಳೆಯುತ್ತಿದ್ದೇವೆ, ನಾವೇ ಹೆಚ್ಚು ತೆರಿಗೆ ಕೊಡುತ್ತೇವೆ. ನಮಗೆ ಒಂದು ರಸ್ತೆ ಹಾಕೋಕೆ ಆಗಲ್ಲ ಅಂದ್ರೆ ನಮಗೆ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳಿದರು. ಕೊಡಲು ಆಗುತ್ತಾ? ನೀವೇ ಹೇಳಿದ್ರಿ ತೆರಿಗೆ ಕಟ್ಟುವುದರ ಮೇಲೆ ಕೊಡಲು ಬರಲ್ಲ. ಎಲ್ಲಿ ಅಭಿವೃದ್ಧಿ ಆಗಿಲ್ಲವೋ ಅಲ್ಲಿಗೆ ದುಡ್ಡು ಕೊಡುವುದು ಎಂದು ಹೇಳಿದ್ದೀರಿ. ಈಗ ದೇಶಕ್ಕೆ ಬಂದರೆ ನಿಮ್ಮ ನಿಲುವು ಬದಲು ಎಂದು ಕಿಡಿಕಾರಿದರು. 

ಒಂದು ತಾಯಿ ತಮ್ಮ ಮಕ್ಕಳಿಗೆ ಊಟ ಹಾಕೋದು ಅವರ ದುಡಿಮೆ ಮೇಲೆ ಅಲ್ಲ. ದುಡಿಯುವ ಮಗನಿಗೂ ದುಡಿಯದಿರುವ ಮಗನಿಗೂ ಒಂದೇ ರೀತಿಯಲ್ಲಿ ಊಟ ಹಾಕುತ್ತಾಳೆ. ದೇಶದಲ್ಲಿ ಕೇಂದ್ರ ಸರ್ಕಾರ ಅಂದರೆ ತಾಯಿ ಇದ್ದಂತೆ. ತಾಯಿ ಮಕ್ಕಳನ್ನು ಅಸಮಾನವಾಗಿ ನೋಡಲ್ಲ. ಸಿದ್ದರಾಮಯ್ಯ ಅವರೇ ಸ್ವಲ್ಪ ಕಾಮನ್‌ಸೆನ್ಸ್ ಇಟ್ಕೊಂಡು ಮಾತನಾಡಿ. ಬರೀ ವ್ಯಾಕರಣ ಹೇಳಿ ದಾರಿ ತಪ್ಪಿಸಬೇಡಿ. ದೇಶದ್ರೋಹದ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಮಾಡಲು ಈ ರೀತಿ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಸಂಸತ್‌ನಲ್ಲಿ ಸೈಲೆಂಟ್, ಹೊರಗಡೆ ವೈಲೆಂಟ್. ವಾಟ್ ಈಸ್ ಯುವರ್ ಪ್ರಾಬ್ಲಮ್? ಒಂಬತ್ತು ವರ್ಷಗಳ ಕಾಲ ಮೌನವಾಗಿದ್ದು ಈಗ ಮಾತನಾಡುತ್ತಿದ್ದೀರಾ ನಾಚಿಕೆ ಆಗಲ್ವಾ ಎಂದು ಹರಿಹಾಯ್ದರು. 

Leave a comment

Your email address will not be published. Required fields are marked *