July 29, 2026
#ಜಿಲ್ಲೆ

ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ

ದಾವಣಗೆರೆ:
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ರಾಷ್ಟ್ರೀಯ ನಾಯಕರು ಆಯ್ಕೆ ಮಾಡಿದ್ದಾರೆ. ಈ ಆಯ್ಕೆ ಬಗ್ಗೆ ವಿರೋಧ ಮಾಡೋದು ತಪ್ಪು ಎಂದು ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಯತ್ನಾಳ್‌ಗೆ ಕಿವಿಮಾತು ಹೇಳಿದರು.
ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಯಾರೇ ಆಗಲಿ ಪಕ್ಷದ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡಬಾರದು ಎಂದು ಸಲಹೆ ನೀಡಿದರು.
ಏನೇ ಸಮಸ್ಯೆ ಇದ್ದರೂ ಯಾರೇ ಆಗಲಿ ರಾಜ್ಯಾಧ್ಯಕ್ಷರ ಬಳಿ ದೂರು ನೀಡಬೇಕು. ಇಲ್ಲವಾದ್ರೆ ಕೇಂದ್ರ ನಾಯಕರ ಜೊತೆ ಮಾತನಾಡಲಿ. ವರಿಷ್ಠರಾದ ಅಮಿತ್ ಶಾ, ರಾಜನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ಅವರ ಜೊತೆ ಮಾತನಾಡಲಿ. ಈ ಬಗ್ಗೆ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ಳುತ್ತದೆ. ಆದರೆ ಹಾದಿ ಬೀದಿಯಲ್ಲಿ ಮಾತನಾಡುವುದನ್ನು ಬಿಡಬೇಕು ಎಂದರು.
ಕನ್ನಡಪರ ಹೋರಾಟಗಾರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕೊಟ್ಟಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಡಿಜೆ ಹಳ್ಳಿ, ಕೆಜಿ ಹಳ್ಳಿ ದಾಂಧಲೆ ಮಾಡಿದವರ ಕೇಸ್ ವಾಪಸ್ ಪಡೆಯಲು ಹೇಳುವ ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವುದು ಸರಿಯಲ್ಲ. ಕನ್ನಡಪರ ಹೋರಾಟಗಾರರ ಹೋರಾಟ ನ್ಯಾಯಯುತವಾಗಿದೆ. ಆದರೆ ಈ ರಾಜ್ಯ ಸರ್ಕಾರ ಮತ್ತೊಮ್ಮೆ ಹೋರಾಟ ಮಾಡದಂತೆ ಎಲ್ಲ ಸೆಕ್ಷನ್ ಹಾಕಿದ್ದಾರೆ. ಕೆಜಿ ಹಳ್ಳಿ ಗಲಭೆಕೋರರು ಪೊಲೀಸರನ್ನೇ ಕೊಲ್ಲಲು ಹಾಗೂ ಪೊಲೀಸರನ್ನು ಸುಡಲು ಹೊರಟಿದ್ದರು. ಈ ಬಗ್ಗೆ ಚಾರ್ಜ್ಶೀಟ್‌ನಲ್ಲಿ ಉಲ್ಲೇಖವಿದೆ. ರಾಜ್ಯ ಸರ್ಕಾರ ಇಂತಹ ಇಬ್ಬಗೆಯ ನೀತಿ ಬಿಟ್ಟು ಹೋರಾಟಗಾರರನ್ನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಬುರುಡೆ ಸರ್ಕಾರ ಅಂತಾ ಆರೋಪ ಮಾಡುತ್ತಿದ್ದರು. ಆದರೆ ಅವರ ಸರ್ಕಾರದಲ್ಲೇ ಕಾಂಗ್ರೆಸ್‌ನವರಿಗೆ ಗ್ಯಾಸ್ ಕೊಡೋ ಯೋಗ್ಯತೆ ಇಲ್ಲ. ಅವರಿಗೆ ಮನೆ ಮನೆ ಗ್ಯಾಸ್ ಸಿಗುವಂತೆ ಮಾಡಿದ್ದು ಮೋದಿ ಸರ್ಕಾರ. ಪ್ರಧಾನಿ ಮೋದಿಯವರು ೪ ಕೋಟಿ ಮನೆಗಳನ್ನು ಕೊಟ್ಟಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಬುರುಡೆ ಸರ್ಕಾರ ಅಂತಾರೆ. ತಮ್ಮ ಸರ್ಕಾರದ ನ್ಯೂನತೆಗಳನ್ನ ಮುಚ್ಚಿ ಹಾಕಲು ಈ ರೀತಿ ವಿಷಯಾಂತರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a comment

Your email address will not be published. Required fields are marked *