ಅಪರಾಧಗಳಲ್ಲಿ ಯಾರೇ ಭಾಗಿಯಾದರೂ ಕಾನೂನು ಕ್ರಮ
ಕಲಬುರಗಿ: ವನ್ಯಜೀವಿಗಳ ಕಾಯ್ದೆ 72ನೇ ವಿಧಿ ಅನ್ವಯ ಯಾವುದೇ ವನ್ಯಜೀವಿಗಳ ಉಗುರು, ಚರ್ಮ ಸೇರಿದಂತೆ ಇತರ ವಸ್ತುಗಳನ್ನು ಯಾರೂ ಬಳಸುವಂತಿಲ್ಲ. ಜೊತೆಗೆ ಮಾರಾಟವಾಗಲಿ, ಸಂಗ್ರಹವಾಗಲಿ, ಸಾಗಾಟವಾಗಲಿ ಮಾಡುವುದು ಅಪರಾಧ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅರಣ್ಯ ಸಚಿವರು, ಇಂತಹ ಅಪರಾಧಗಳಲ್ಲಿ ಯಾರೇ ಭಾಗಿಯಾದರೂ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತದೆ. ಈ ಪ್ರಕರಣದಿಂದ ಎಲ್ಲರೂ ಜಾಗೃತಗೊಳ್ಳಬೇಕು. ವನ್ಯಜೀವಿಗಳ, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ತಿಳಿಸಿದ್ದಾರೆ.
ನಟ ದರ್ಶನ್ ಹಾಗೂ ಜಗ್ಗೇಶ್ ಹುಲಿ ಉಗುರು ಬಳಸಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ಯಾರ ಹೆಸರನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ನಿಯಮ-72 ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಈ ನೆಲದ ಕಾನೂನು ಎಲ್ಲರಿಗೂ ಸರಿಸಮನಾಗಿದೆ ಎಂದು ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.













































































































































































































































































































































































































































































































































































































































































































































































































































































































































































































































































































































