July 29, 2026
#ರಾಷ್ಟ್ರೀಯ

224 ಕ್ಷೇತ್ರಗಳಲ್ಲೂ ಸಿಎಂ, ಡಿಸಿಎಂ ಘೋಷಿಸಿ

ನವದೆಹಲಿ:
ಸಂವಿಧಾನದ ತಿದ್ದುಪಡಿ ಮಾಡಿ 224 ಕ್ಷೇತ್ರಗಳಲ್ಲೂ ಶಾಸಕರನ್ನೂ ಸಿಎಂ ಮತ್ತು ಡಿಸಿಎಂ ಮಾಡಿ ಬಿಡಿ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ವ್ಯಂಗ್ಯ ಮಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಹೆಚ್ಚುವರಿ ಡಿಸಿಎಂ ನೇಮಕ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್‌ನವರು ಬಹಳ ದಿನಗಳಿಂದ ಮದುವೆ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದರು. ಆದರೆ ನಿರೀಕ್ಷೆಗೂ ಮೀರಿ ಅವರ ಮದುವೆ ಆಯಿತು. ಭಾರಿ ಬಹುಮತದೊಂದಿಗೆ ಅಧಿಕಾರ ಬಂತು. ಅಂದಿನಿAದಲೇ ಸಿಎಂ, ಡಿಸಿಎಂ ವಿಚಾರದಲ್ಲಿ ಗೊಂದಲ ಸೃಷ್ಟಿಯಾಯಿತು. ಸಿಎಂ ಆಯ್ಕೆ ವೇಳೆ ಶಿವಕುಮಾರ್ ದೆಹಲಿಗೆ ಹೋಗಲಿಲ್ಲ. ಎರಡು ದಿನದ ಬಳಿಕ ದೆಹಲಿಗೆ ಹೋಗಿ ಖರ್ಗೆ ಸಿಎಂ ಆಗಲಿ ಎಂದರು. ಡಿ.ಕೆ ಶಿವಕುಮಾರ್‌ಗೆ ಏಕಾಏಕಿ ದಲಿತರ ಮೇಲೆ ಪ್ರೀತಿ ಬಂತು. ಖರ್ಗೆಯವರು ಬೇಕಾದರೆ ಸಿಎಂ ಆಗಲಿ ಎಂದರು.
ಮೊನ್ನೆ ಪ್ರಧಾನಿ ಅಭ್ಯರ್ಥಿ ವಿಚಾರಕ್ಕೆ ಬಂದಾಗ ರಾಹುಲ್‌ಗಾಂಧಿ ಹೆಸರು ಡಿಕೆ ಶಿವಕುಮಾರ್ ಉಲ್ಲೇಖಿಸಿದರು. ಯಾಕೆ ಖರ್ಗೆ ಹೆಸರು ಶಿವಕುಮಾರ್ ಹೇಳಲಿಲ್ಲ? ಬರೀ ತೋರಿಕೆಗಾಗಿ ದಲಿತರ ಮೇಲೆ ಪ್ರೀತಿ ತೋರುವ ಕೆಲಸ ಮಾಡುತ್ತಿದ್ದಾರೆ. ರಾಮಮಂದಿರ, ದಲಿತರ ವಿಚಾರ ಹೀಗೆ ಎಲ್ಲಾ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮೂರು ಜನರು ಕಾಂಗ್ರೆಸ್ ನಾಯಕರಿದ್ದರೆ, ನಾಲ್ಕು ವಿಚಾರದಲ್ಲಿ ಜಗಳ ಮಾಡುತ್ತಾರೆ. ಹಿಜಬ್ ಕೇಸ್ ವಾಪಸ್ ಪಡೆಯಲು ಯಾರು ಮನವಿ ಮಾಡಿದರು? ಮುಸ್ಲಿಂರನ್ನು ನೋಡಿದ ತಕ್ಷಣ ಸಿಎಂ ಘೋಷಣೆ ಮಾಡಿದರು. ಹಿಂದೂಗಳು ಒಟ್ಟಾಗಿದ್ದಾರೆ. ಲೋಕಸಭೆ ಚುನಾವಣೆ ಅಥವಾ ಅದರ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಇರಲ್ಲ ಎಂದು ಹೇಳಿದರು.
ಜಾತಿ ಸಮೀಕ್ಷೆ ವಿಚಾರದಲ್ಲಿ ತಮ್ಮನ್ನು ತಾವು ಸಿದ್ದರಾಮಯ್ಯ ಹಿಂದುಳಿದ ನಾಯಕ ಎಂದು ಕರೆದುಕೊಂಡಿದ್ದಾರೆ. ಆದರೆ ಅವಕಾಶ ಸಿಕ್ಕಾಗ ಸಮೀಕ್ಷೆ ಬಿಡುಗಡೆ ಮಾಡುವ ಪ್ರಯತ್ನ ಮಾಡಲಿಲ್ಲ. ಈಗ ಮತ್ತೆ ಸಿಎಂ ಆಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ಸಮೀಕ್ಷೆ ಬಿಡುಗಡೆ ಎಂದಿದ್ದರು. ನವೆಂಬರ್, ಡಿಸೆಂಬರ್ ಮುಗೀತು, ಇನ್ನೂ ಜಾರಿಯಾಗಿಲ್ಲ. ಮುಸ್ಲಿಂ ಹಾಗೂ ಹಿಂದುಳಿದ ಹೆಸರಿನಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಪ್ರತಿ ಹಿಂದೂ ಮನೆಗೂ ಮಂತ್ರಾಕ್ಷತೆ ಕೊಟ್ಟು ಅಯೋಧ್ಯೆಗೆ ಕರೆಯುತ್ತಿದ್ದೇವೆ. ಇದು ತುಂಬಾ ಸಂತೋಷದ ವಿಚಾರ. ರಾಮಲಿಂಗಾ ರೆಡ್ಡಿ ಅವರು ಮಂದಿರದ ಪರವಾಗಿದ್ದಾರೆ. ಆದರೆ ಡಿಸಿಎಂ ಸೇರಿ ಕೆಲವು ನಾಯಕರಿಗೆ ಕೆಟ್ಟ ಕಾಯಿಲೆ ಇದೆ. ಮಂತ್ರಾಕ್ಷತೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮಂತ್ರಾಕ್ಷತೆ ಅಕ್ಕಿ ಅನ್ನಭಾಗ್ಯದ್ದಲ್ಲ. ರೈತ ಬೆಳೆದಿದ್ದು. ಡಿಸಿಎಂ ದೇಶದ ಜನರಲ್ಲಿ ಕ್ಷಮೆ ಕೇಳುವುದರ ಜೊತೆಗೆ ಮಂತ್ರಾಕ್ಷತೆ ಪಡೆದು ಅಯೋಧ್ಯೆಗೆ ಬರಬೇಕು ಎಂದು ಆಗ್ರಹಿಸಿದರು.

Leave a comment

Your email address will not be published. Required fields are marked *