September 14, 2026
#ಜಿಲ್ಲೆ

NIAಯಿಂದ ಬಂಧನಕ್ಕೊಳಗಾದ ವಿದ್ಯಾರ್ಥಿಗೆ ಕಾಲೇಜಲ್ಲಿರುವಾಗ್ಲೇ ಇತ್ತು ISIS ಸಂಪರ್ಕ!

ಬಳ್ಳಾರಿ: ಕಳೆದ 2 ದಿನಗಳ ಹಿಂದೆ ಗಣಿನಾಡು ಬಳ್ಳಾರಿಯಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಬಂಧನಕ್ಕೊಳಗಾದ ವಿದ್ಯಾರ್ಥಿಯ ಕತೆ ಕೇಳಿದರೆ ಒಂದು ಕ್ಷಣ ಬೆಚ್ಚಿಬೀಳೋದು ಗ್ಯಾರಂಟಿ. ಬಂಧನಕ್ಕೆ ಒಳಗಾದ ಸಮೀರ್ ಕಾಲೇಜು ವಿದ್ಯಾರ್ಥಿಯಾಗಿದ್ದು, ವ್ಯಾಸಂಗ ಮಾಡೋವಾಗಲೇ ಆತನಿಗೆ ಐಎಸ್‌ಐಎಸ್ ಸಂಪರ್ಕ ಇತ್ತು ಎನ್ನುವ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

ಎನ್‌ಐಎ ದಾಳಿಯಲ್ಲಿ ಬಳ್ಳಾರಿ ಮೂಲದ ಇಬ್ಬರನ್ನು ಬಂಧಿಸಿದ್ದು ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕಾಲೇಜಿನಲ್ಲಿ ವ್ಯಾಸಂಗ ಮಾಡೋವಾಗಲೇ ಆ ಯುವಕನಿಗಿರೋ ಸಂಪರ್ಕ ಮಾತ್ರ ಬೆಚ್ಚಿ ಬೀಳುವಂತಿದೆ. ಕೌಲ್ ಬಜಾರ್ ಪ್ರದೇಶ, ಜಾಗೃತಿ ನಗರ ಬ್ರೂಸ್ ಪೇಟೆ ಏರಿಯಾ ಸೇರಿ ಒಟ್ಟು 8 ಕಡೆ ದಾಳಿ ಮಾಡಲಾಗಿತ್ತು.

ದಾಳಿಯಲ್ಲಿ ಸೈಯದ್ ಸಮೀರ್ ಮತ್ತು ಮೊಹಮ್ಮದ್ ಸುಲೇಮಾನ್ ಬಂಧಿಸಲಾಗಿತ್ತು. ಮೊಹಮ್ಮದ್ ಸುಲೇಮಾನ್ ಉಗ್ರ ಸಂಘಟನೆ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಇದರಲ್ಲಿ ಸೈಯದ್ ಸಮೀರ್ 20ರ ಹರೆಯದ ಬಿಸಿಎ ವಿದ್ಯಾರ್ಥಿ. ಬಳ್ಳಾರಿಯ ಕಾಲೇಜೊಂದರಲ್ಲಿ ಬಿಸಿಎ 3ನೇ ಸೆಮಿಸ್ಟರ್ ಓದುತ್ತಿದ್ದಾನೆ. ಮುಸ್ಲಿಂ ಬಹುಪತ್ನಿತ್ವ ಬಗ್ಗೆ ಮತ್ತು ಮೊಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿದ ಉಪನ್ಯಾಸಕರ ವಿರುದ್ಧ ಸಮೀರ್ ತಿರುಗಿ ಬಿದ್ದಿದ್ದ. 

ಪ್ರಾಧ್ಯಾಪಕರ ವಿರುದ್ಧ ಕಳೆದ ತಿಂಗಳು ಈತ ದೊಡ್ಡ ಪ್ರತಿಭಟನೆ ಮಾಡಿದ್ದ. ಕಾಲೇಜು ಮುಂದೆ ಅಷ್ಟೇ ಅಲ್ಲದೇ ಎಸ್‌ಪಿ ಕಚೇರಿ ಮುಂದೆ ಹೈಡ್ರಾಮಾ ಮಾಡಿದ್ದ. ನೂರಾರು ಜನರನ್ನು ಸೇರಿಸಿ ಅಂದು ರಾತ್ರಿ ಕೌಲ್ ಬಜಾರ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದ. ಇವನ ವರ್ತನೆಯಿಂದ ಅಂದು ಪೊಲೀಸರೇ ಒಂದು ಕ್ಷಣ ಹೌಹಾರಿದ್ದರು. ಆದರೆ ಇದೀಗ ಎನ್‌ಐಎ ಅಧಿಕಾರಿಗಳು ಬಂಧಿಸಿರೋದು ಪೊಲೀಸರಿಗೂ ಅಚ್ಚರಿ ಮೂಡಿಸಿದೆ.

ಬಳ್ಳಾರಿಯ ಜಾಗೃತಿ ನಗರ ನಿವಾಸಿಯಾಗಿರುವ ಸಮೀರ್ ತಂದೆ-ತಾಯಿಯವರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮತ್ತೊಬ್ಬ ಆರೋಪಿ ಮೊಹಮ್ಮದ್ ಸುಲೇಮಾನ್ ನಿಷೇಧಿತ ಸಂಘಟನೆ ಪಿಎಫ್‌ಐನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ. ಈತ ಕೌಲ್ ಬಜಾರ್ ಮುಖ್ಯ ರಸ್ತೆಯಲ್ಲಿ ಬಟ್ಟೆ ಅಂಗಡಿ ವ್ಯಾಪಾರ ಮಾಡುತ್ತಿದ್ದ. ಸುಲೇಮಾನ್ ಸಹಚರನಾಗಿ ಕೆಲಸ ಮಾಡುತ್ತಿದ್ದ ಸಮೀರ್ ವಿಚಾರಣೆಗೆ ಎನ್‌ಐಎ ಅಧಿಕಾರಿಗಳು ಮುಂದಾಗಿದ್ದಾರೆ. 

Leave a comment

Your email address will not be published. Required fields are marked *