September 12, 2026
#ಜಿಲ್ಲೆ

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದಾದ್ರೆನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ

ಬಳ್ಳಾರಿ:
ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದಾದ್ರೆ ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ ಎನ್ನುವ ಮೂಲಕ ಖರ್ಗೆ ಪರ ಸಚಿವ ಬಿ. ನಾಗೇಂದ್ರ ಬ್ಯಾಟಿಂಗ್ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಮಾಡೋದು, ದಲಿತ ಪ್ರಧಾನಿ ಮಾಡೋದು ಇಂಡಿಯಾ ಒಕ್ಕೂಟದ ಉದ್ದೇಶ. ಹೀಗಾಗಿ ಒಕ್ಕೂಟದಿಂದ ಖರ್ಗೆ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಪ್ರಸ್ತಾಪ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ಸ್ವಇಚ್ಛೆಯಿಂದ ಸಿದ್ದರಾಮಯ್ಯ ಅವರು ಹಾಗೆ ಹೇಳಿರಬಹುದು. ಅದು ಅವರ ಇಚ್ಛೆ ಎಂದರು.
ನನಗೂ ಖರ್ಗೆ ಪ್ರಧಾನಿ ಆಗಬೇಕೆಂದಿದೆ. ಅದರ ಜೊತೆಗೆ ಯುವಕರ ಕಣ್ಮಣಿಯಾಗಿರೋ ರಾಹುಲ್ ಗಾಂಧಿ ಕೂಡಾ ಪ್ರಧಾನಿಯಾಗಬೇಕು ಎನ್ನುವುದು ಇದೆ. ಭಾರತ ಜೋಡೋ ಯಾತ್ರೆಯಲ್ಲಿ ಏಳು ಸಾವಿರ ಕಿ.ಮೀ ಪಾದಯಾತ್ರೆ ಮಾಡಿ ಜನಮನ ಗೆದ್ದಿದ್ದಾರೆ. ಇಂಡಿಯಾ ಒಕ್ಕೂಟದ ವ್ಯವಸ್ಥೆಯಲ್ಲಿ ಬೇರೆ ಬೇರೆ ಅಂಗಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು. ಮಮತಾ ಬ್ಯಾನರ್ಜಿ, ಕೇಜ್ರಿವಾಲ್ ಕೂಡ ಖರ್ಗೆಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಬೆಂಬಲಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದ ಅವರು, ನಮ್ಮವರ ಹೆಸರು ನಾವೇ ಹೇಳಬಾರದಲ್ವಾ? ಹೀಗಾಗಿ ಕಾಂಗ್ರೆಸ್‌ನವರು ಅಭ್ಯರ್ಥಿ ಹೆಸರು ಹೇಳಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಇನ್ನು ಒಕ್ಕೂಟದ ವ್ಯವಸ್ಥೆಯಲ್ಲಿ ಬೇರೆಯವರು ನಮ್ಮ ಪಕ್ಷದ ಹೆಸರು ಹೇಳಬಹುದು. ನಾವು ಹೇಳಲು ಆಗಲ್ಲ. ಕಾಂಗ್ರೆಸ್‌ನಲ್ಲಿ ಒಂದು ವ್ಯವಸ್ಥೆ ಇದೆ. ಪಾರ್ಲಿಮೆಂಟ್ ಚುನಾವಣೆ ಬಳಿಕ ಪಾರ್ಟಿ ಚೌಕಟ್ಟಿನಲ್ಲಿ ನಡೆಯುತ್ತದೆ ಎಂದು ತಿಳಿಸಿದರು.

Leave a comment

Your email address will not be published. Required fields are marked *