ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಒಬ್ಬರೂ ತ್ಯಾಗ ಬಲಿದಾನ ಮಾಡಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ‘ಕೈ’ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಬಿಜೆಪಿಯವರು ಒಬ್ಬರೂ ತ್ಯಾಗ ಬಲಿದಾನ ಮಾಡಿಲ್ಲ. ಇಂದಿರಾ ಗಾಂಧಿರವರು ಬಾಲ್ಯದಿಂದಲೇ ಜನಪರ ಧೋರಣೆ ಹೊಂದಿದ್ದರು. ದೇಶಕ್ಕಾಗಿ ಇಂದಿರಾ ಗಾಂಧಿ ಬಹಳ ದೃಢವಾದ ನಿರ್ಧಾರ ತೆಗೆದುಕೊಳ್ತಿದ್ದರು. ಹೀಗಾಗಿ ಇಂದಿರಾ ಗಾಂಧಿರವರನ್ನು ಉಕ್ಕಿನ ಮಹಿಳೆ ಎಂದು ಕರೆಯುತ್ತಿದ್ದರು ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಬೈರತಿ ಸುರೇಶ್, ಬಿ.ಕೆ ಹರಿಪ್ರಸಾದ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಚಂದ್ರಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೇ ಇಂದಿರಾ ಗಾಂಧಿಯವರನ್ನು ಹಾಡಿ ಹೊಗಳಿದ್ದಾರೆ.
ಇಂದಿರಾಗಾಂಧಿರವರು ಗರೀಬಿ ಹಠಾವೋ ಎನ್ನುತ್ತಿದ್ದರು
ರಾಜಕೀಯ ಸಮಾರಂಭದಲ್ಲಿ ಸಿಳ್ಳೆ ಹೊಡೆಯುವುದು ದಯಮಾಡಿ ಮಾಡಬೇಡಿ. ರಾಷ್ಟ್ರಾದ್ಯಂತ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ ಮಾಡ್ತಾ ಇದ್ದೇವೆ. ಅವರು ಹುಟ್ಟಿದ ಸ್ಥಳ ರಾಜಕೀಯ ಕೇಂದ್ರವಾಗಿತ್ತು. ಅವರ ತಂದೆ, ತಾಯಿ, ತಾತ ಸಕ್ರಿಯ ರಾಜಕೀಯ ಮಾಡಿದವರು. ಅವರು ಸಣ್ಣವರು ಇದ್ದಾಗ ಗಾಂಧಿಜೀ ಸೇರಿದಂತೆ ಎಲ್ಲರು ಬರುತ್ತಿದ್ದರು. ಹಾಗಾಗಿ ಇಂದಿರಾಗಾಂಧಿ ಬಾಲ್ಯದಿಂದಲೇ ಜನಪರ ಧೋರಣೆ ಹೊಂದಿದ್ದರು. ದೇಶಕ್ಕಾಗಿ ಬಹಳ ದೃಢವಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಉಕ್ಕಿನ ಮಹಿಳೆ ಎಂದು ಕರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಬಿಜೆಪಿಯವರು ಒಬ್ಬರು ಸಹ ಮಾಡಿಲ್ಲ. ಸಮಾ ಸಮಾಜದ ನಿರ್ಮಾಣ ಮಾಡುವುದಕ್ಕೆ ಕಾಂಗ್ರೆಸ್ ಶ್ರಮಿಸುತ್ತಿದೆ. ಇಂದಿರಾಗಾಂಧಿ ಹಠಾವೋ ಎಂದು ವಿಪಕ್ಷಗಳ ನಾಯಕರು ಎನ್ನುತ್ತಿದ್ದರು. ಆದರೆ ಇಂದಿರಾಗಾಂಧಿ ಗಗರೀಬಿ ಹಠಾವೋ ಎನ್ನುತ್ತಿದ್ದರು ಎಂದು ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇನ್ನು ಇದೇ ವೇಳೆ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಮಾತನಾಡಿದ್ದು, ಇಡೀ ರಾಷ್ಟ್ರದ ಇತಿಹಾಸದಲ್ಲಿ ಬಹಳ ಪ್ರಮುಖ ದಿನ. ಇಂದಿರಾ ಗಾಂಧಿಯವರು ಹುಟ್ಟಿದ ಪವಿತ್ರ ದಿನ. ಝಾನ್ಸಿ ರಾಣಿ ಹಾಗೂ ಇಂದಿರಾಗಾಂಧಿ ಬಹಳ ಪ್ರಮುಖ ಮಹಿಳೆಯರು. ಇಂದಿರಾಗಾಂಧಿ ಹಸಿರು ಕ್ರಾಂತಿ ಮಾಡಿದವರು. ಈಗಿನ ಪ್ರಧಾನಿ ಅಂತಹ ಯಾವುದೆ ಕ್ರಾಂತಿ ಮಾಡಿಲ್ಲ. ಅವರದ್ದೇನಿದ್ರೂ ಸ್ಕ್ರೀನ್ ಕ್ರಾಂತಿ. ಕೇವಲ ಟಿವಿ ಸ್ಕ್ರೀನ್ ಗಳ ಮೇಲೆ ಕಾಣಿಸುವ ಕ್ರಾಂತಿ ಮಾಡಿದವರು. ಕೇವಲ ದ್ವಜ ಹಿಡಿದು ಭಾರತ್ ಮಾತಾಕಿ ಜೈ ಅಂದ್ರೆ ದೇಶಭಕ್ತ ಅಲ್ಲ. ದೇಶದ ಆಸ್ತಿಪಾಸ್ತಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಕು. ಅದನ್ನು ಇಂದಿರಾಗಾಂಧಿ ಮಾಡಿದ್ದರು. ಯಾವುದೇ ಧರ್ಮದ ಬಗ್ಗೆ ಭೇದ ಮಾಡದೇ ತಮ್ಮ ಪ್ರಾಣಕ್ಕೆ ಬೆದರಿಕೆ ಇದ್ದರೂ ಸಿಕ್ಕರನ್ನು ಅಂಗರಕ್ಷಕರಾಗಿ ಇಟ್ಟುಕೊಂಡಿದ್ದರು. ಈಗ ಅಂತಹ ಜಾತ್ಯಾತೀತ ಭಾವನೆ ಯಾರಲ್ಲೂ ಕಾಣುವುದಿಲ್ಲ ಎಂದರು.














































































































































































































































































































































































































































































































































































































































































































































































































































































































































































































































































































































