May 30, 2026
#ಬೆಂಗಳೂರು

ಕೇಂದ್ರ ಸೇವೆಗೆ ತೆರಳಲು ರಾಜ್ಯದ ಐಪಿಎಸ್ ಅಧಿಕಾರಿಗಳ ನಕಾರ

ಬೆಂಗಳೂರು:
ಕರ್ನಾಟಕದಲ್ಲಿರುವ ಎಸ್‌ಪಿ ದರ್ಜೆಯ ಅಧಿಕಾರಿಗಳನ್ನು ಕೇಂದ್ರ ಗೃಹ ಇಲಾಖೆ ಕೇಂದ್ರದ ಸೇವೆಗೆ ಬಲವಂತವಾಗಿ ಶಿಫಾರಸ್ಸು ಮಾಡಿರುವ ಆರೋಪ ಕೇಳಿಬಂದಿದೆ. ತಮ್ಮ ಅಭಿಪ್ರಾಯಗಳನ್ನು ಕೇಳದೆ ಶಿಫಾರಸ್ಸು ಮಾಡಲಾಗಿದೆ ಎಂದು ಕೆಲವು ಐಪಿಎಸ್ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದು, ಕೇಂದ್ರಕ್ಕೆ ಲಿಖಿತವಾಗಿ ಅಭಿಪ್ರಾಯ ತಿಳಿಸಲು ಚಿಂತನೆ ನಡೆಸಿದ್ದಾರೆ.
ಒತ್ತಾಯ ಪೂರ್ವಕವಾಗಿ ಕೇಂದ್ರದ ಸೇವೆಗೆ ಶಿಫಾರಸ್ಸು ಮಾಡಿರುವ ಹಿನ್ನೆಲೆ ಕೆಲವು ಐಪಿಎಸ್ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ. ಕೇಂದ್ರ ಗೃಹ ಇಲಾಖೆಯು ಒಟ್ಟು 28 ಎಸ್‌ಪಿ ದರ್ಜೆಯ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಶಿಫಾರಸ್ಸು ಮಾಡಿದೆ. ಈ ಪೈಕಿ 26 ಐಪಿಎಸ್ ಅಧಿಕಾರಿಗಳು ಕರ್ನಾಟಕದವರೇ ಆಗಿದ್ದಾರೆ.
ತಮ್ಮ ಅಭಿಪ್ರಾಯ ಕೇಳದೇ ಡಿಪಿಎಆರ್ ಹೆಸರು ಕಳುಹಿಸಿದೆ ಎಂದು ಅತೃಪ್ತಿ ತೋರಿಸಿರುವ ಕೆಲವರು ಶಿಫಾರಸ್ಸನ್ನು ತಿರಸ್ಕರಿಸಲು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಲಿಖಿತವಾಗಿ ಅಭಿಪ್ರಾಯ ತಿಳಿಸಲು ಚಿಂತನೆ ನಡೆಸಿದ್ದಾರೆ. 2012ರಲ್ಲಿ ಮುಂಬಡ್ತಿ ಪಡೆದಿದ್ದರು. ಆದರೆ ಎರವಲು ಸೇವೆಗೆ ಬಲವಂತವಾಗಿ ಕಳುಹಿಸಲು ಮುಂದಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕೇಂದ್ರದ ಸೇವೆಗೆ ಶಿಫಾರಸುಗೊಂಡವರ ವಿವರ:
ಬೆಂಗಳೂರಿನ ಡಿಸಿಪಿಗಳಾದ ಸಿ.ಕೆ.ಬಾಬಾ, ಎಸ್.ಗಿರೀಶ್, ಡಿ.ದೇವರಾಜ್, ಡಿ.ಆರ್.ಸಿರಿಗೌರಿ, ಅಬ್ದುಲ್ ಅಹದ್, ಅಮೃತ್ ಪ್ರಕಾಶ್ ನಿಖಂ, ಎಸ್‌ಪಿಗಳಾದ ಇಲಕಿಯಾ ಕರುಣಾಕರನ್, ಡಾ.ಭೀಮಾಶಂಕರ್ ಗುಳೇದ್, ಧರ್ಮೇಂದ್ರ ಕುಮಾರ್ ಮೀನಾ, ಶ್ರೀನಾಥ್ ಮಹದೇವ ಜೋಶಿ ಸೇರಿದಂತೆ ಇತರರನ್ನು ಕೇಂದ್ರದ ಸೇವೆಗೆ ಶಿಫಾರಸ್ಸು ಮಾಡಲಾಗಿದೆ.

Leave a comment

Your email address will not be published. Required fields are marked *