July 29, 2026
#ಬೆಂಗಳೂರು

ಡಿಸಿಎಂ ಕೂಗಿಗೆ ಸ್ವಪಕ್ಷೀಯರಿಗೇ ಡಿಕೆ ಶಿವಕುಮಾರ್ ತಿರುಗೇಟು

ಬೆಂಗಳೂರು: ಕಾಂಗ್ರೆಸ್​ನಲ್ಲಿ ಸಮುದಾಯವಾರು ಉಪ ಮುಖ್ಯಮಂತ್ರಿ ಬೇಡಿಕೆ ಮುನ್ನೆಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್  ಸ್ವಪಕ್ಷೀಯರಿಗೇ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೇಕಾದಷ್ಟು ಜನ ಆಸೆಪಡುತ್ತಾರೆ. ಅಂಥವರಿಗೆ ಏನೂ ಹೇಳಲಾಗದು. ನಮ್ಮ ಪಾರ್ಟಿಗೆ ಹೈಕಮಾಂಡ್ ಇದೆ. ನನ್ನನ್ನು ಡಿಸಿಎಂ ಮಾಡಿದ್ದಾರೆ. ಶಿವಕುಮಾರ್ ಮೆತ್ತಗಾಗ್ತಾರೋ‌ ಇಲ್ವೋ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ನನ್ನ ರಾಜಕೀಯ ಟ್ರ್ಯಾಕ್ ರೆಕಾರ್ಡ್ ಇದೆ. 1975 ರಿಂದ ನನ್ನ ಹೋರಾಟ ನೋಡಿದ್ದೀರಿ. ಹೋರಾಟದ ಮೂಲಕ ನಾನು ಈ‌ ಮಟ್ಟಕ್ಕೆ ಬಂದಿದ್ದೇನೆ ಎಂದು ಸ್ವಪಕ್ಷೀಯರಿಗೇ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ನಾವೂ ಮೇಲ್ಮನವಿ ಸಲ್ಲಿಸಿದ್ದೆವು. ಎರಡೂ ರಾಜ್ಯಗಳನ್ನು ಕರೆದು ಮಾತನಾಡಿ ಎಂದು ಕೇಳಿಕೊಂಡಿದ್ದೆವು. ನಮ್ಮಿಂದ ಏನಾಗುತ್ತದೆಯೋ ಅದನ್ನು ಮಾಡುತ್ತೇವೆ ಎಂದರು. ಮಳೆ ನಿರೀಕ್ಷೆ ಮಾಡಿದ್ದೆವು, ಆದ್ರೆ ಆಗಿಲ್ಲ. ಮಧ್ಯದಲ್ಲಿ ರೈತರನ್ನೂ ನಾವು ಕಾಪಾಡಿದ್ದೇವೆ. ರೈತರಿಗೆ ತಿಳುವಳಿಕೆ ಕೊಡ್ಬೇಕು ಅಂದುಕೊಂಡಿದ್ದೆವು. ಕೊನೆಗೆ ರೈತರ ಬೆಳೆಗಳಿಗೆ ನೀರು ಬಿಟ್ಟಿದ್ದೇವೆ. ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ನಮ್ಮ ರೈತ ಸಂಘಟನೆಳೂ ಅರ್ಜಿ ಸಲ್ಲಿಸಿವೆ. ತಮಿಳುನಾಡು ರೈತರೂ ಅರ್ಜಿ ಸಲ್ಲಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಂಡ್ಯ ಬಂದ್​​ನಿಂದ ಪ್ರಯೋಜನ ಆಗಲ್ಲ. ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆದರೆ ಕಷ್ಟ. ವಿಚಾರ ಕೋರ್ಟ್​​​ನಲ್ಲಿದೆ. ನಾವೂ ರೈತರಿಗಾಗೇ ಹೋರಾಟ ಮಾಡ್ತಿರೋದು. ಜನರಿಗೆ ತೊಂದರೆ ಆಗೋದು ಬೇಡ. ಪ್ರತಿಭಟನೆ, ಹೋರಾಟ ಮಾಡಿಕೊಳ್ಳಲಿ. ಆದರೆ, ಬಂದ್ ಕೈ ಬಿಡಿ ಎಂದು ಮನವಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಹೆಚ್​ಡಿಕೆ, ಬಿಜೆಪಿಗೆ ತಿರುಗೇಟು

ನಾನು ಹಿಂದೆ ದೇವಸ್ಥಾನಕ್ಕೆ ಹೋದಾಗ ಗೇಲಿ ಮಾಡಿದ್ದರು. ಅವರು. ಆದರೆ, ಅವರು ಹೋಮ ಎಲ್ಲ ಮಾಡಿಸಿದರು. ನಾನು ಅದನ್ನೆಲ್ಲಾ ಹೇಳೋಕೆ ಹೋಗಲ್ಲ. ಎಲ್ಲರಿಗೂ ಉತ್ತರ ಕೊಡೋ ಶಕ್ತಿ‌ ನನಗೆ ಇದೆ. ಹೆಚ್​ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿಗೆಲ್ಲಾ ನಿಂತಲ್ಲಿಂದಲೇ ಉತ್ತರ ಕೊಡಲು ಗೊತ್ತಿದೆ ಎಂದು ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪರ ಸಂಘಟನೆಗಳಿಗೆ ರೋಷ ಬಂದಿದೆ. ಸ್ವಾಮೀಜಿಗಳು ಬಂದಿದ್ದಾರೆ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಇವರೆಲ್ಲ ಎಲ್ಲೋಗಿದ್ರು? ಬಿಜೆಪಿ ಸ್ನೇಹಿತರಿಗೆ ಮನವಿ ಮಾಡುತ್ತಿದ್ದೇನೆ. ದೆಹಲಿಯಲ್ಲಿ ಸಂಸದರ ಸಭೆ ಕರೆದಾಗ ಒಳಗಡೆ ಏನೋ‌ ಮಾತಾಡಿದ್ರು. ಹೊರಗೆ ಮಾಧ್ಯಮಗಳ ಮುಂದೆ ಇನ್ನೇನೋ‌ ಮಾತಾಡಿದ್ರು. ಇದಕ್ಕೆಲ್ಲಾ ಪರಿಹಾರ ಮೇಕೆದಾಟು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Leave a comment

Your email address will not be published. Required fields are marked *