July 29, 2026
#ಬೆಂಗಳೂರು

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ 


ನೆಲಮಂಗಲ: ದಿನೇ ದಿನೆ ಬಿಎಂಟಿಸಿ ಬಸ್‌ಗೆ ಬಲಿಯಾಗುತ್ತಿರುವವರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹದೇ ಒಂದು ಪ್ರಕರಣ ಶನಿವಾರವೂ ನಡೆದಿದೆ. ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ಸಮೀಪದ ಬಿನ್ನಮಂಗಲ ಬಳಿ ಘಟನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಗುದ್ದಿದ್ದು, ಗುದ್ದಿದ ರಭಸಕ್ಕೆ ಬೈಕ್ ಸವಾರ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ಹಿಂದೆ ಕಿಲ್ಲರ್ ಬಿಎಂಟಿಸಿ ಬಸ್‌ಗೆ ಎಂಜಿನಿಯರಿಂಗ್ ವಿದ್ಯಾರ್ಥಿ ಬಲಿಯಾದ ಘಟನೆ ಯಶವಂತಪುರದ ಗೋವರ್ಧನ ಬಳಿ ನಡೆದಿತ್ತು. ಗಂಗಾಧರ್ (21) ಮೃತ ವಿದ್ಯಾರ್ಥಿ. ಹೆಚ್‌ಎಎಲ್‌ಗೆ ಇಂಟರ್ನಿಶಿಪ್ ಸರ್ಟಿಫಿಕೇಟ್ ತರಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ, ಘಟನೆಯಲ್ಲಿ ಗಂಗಾಧರ್ ಸ್ಥಳದಲ್ಲೇ ಮೃತಪಟ್ಟಿದ್ದ. ಗಂಗಾಧರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ, ಬಿಎಂಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. 

ಇದಕ್ಕೂ ಮೊದಲು ಬೈಕ್‌ಗೆ ಹಿಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಘಟನೆಯ ಪರಿಣಾಮ ಮೂರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು. ಈ ಘಟನೆ ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್‌ನಲ್ಲಿ ನಡೆದಿತ್ತು. ಚಾಲಕರ ವೇಗದ ಚಾಲನೆಯೇ ಈ ರೀತಿಯಾದ ಘಟನೆಗಳಿಗೆ ಮೂಲ ಕಾರಣ ಎಂದು ಜನರು ಆರೋಪಿಸುತ್ತಿದ್ದಾರೆ.  

Leave a comment

Your email address will not be published. Required fields are marked *