ಒಂದೇ ನಗರಸಭೆಗೆ ಇಬ್ಬರು ಆಯುಕ್ತರು – ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ
ಬಾಗಲಕೋಟೆ: ಇಲ್ಲಿನ ನಗರಸಭೆ ಆಯುಕ್ತರ ಸ್ಥಾನಕ್ಕಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದೆ. ಇಬ್ಬರು ಅಧಿಕಾರಿಗಳು ಒಂದೇ ಚೇಂಬರ್ನಲ್ಲಿ ಕುಳಿತು ಕಿತ್ತಾಟ ಆರಂಭಿಸಿದ್ದಾರೆ.
ಹಿಂದಿನ ನಗರಸಭಾ ಆಯುಕ್ತರಾಗಿದ್ದ ವಾಸಣ್ಣ.ಆರ್ ಹಾಗೂ ಈಗಿನ ಆಯುಕ್ತ ರಮೇಶ್ ಜಾಧವ್ ಮಧ್ಯೆ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಾಸಣ್ಣ ಅವರನ್ನು ಆ.11 ರಂದು ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ರಮೇಶ್ ಜಾಧವ್ ಅವರನ್ನು ನಿಯೋಜಿಸಲಾಗಿತ್ತು. ಬಳಿಕ ವಾಸಣ್ಣ ಅವರು ಕೆಇಟಿ ಮೆಟ್ಟಿಲೇರಿದ್ದರು.
ಇದಿಗ ಕೆಇಟಿ ಆದೇಶ ತಂದಿದ್ದೇನೆ ಎಂದು ವಾಸಣ್ಣ ವಾದಿಸಿದ್ದಾರೆ. ವಾಸಣ್ಣ ಅವರು ಸರ್ಕಾರಿ ಆದೇಶ ತೆಗೆದುಕೊಂಡು ಬಂದು ಬೇಕಾದರೆ ಹುದ್ದೆಗೆ ನಿಯೋಜನೆಗೊಳ್ಳಲಿ ಎಂದು ರಮೇಶ್ ವಾದಿಸಿದ್ದಾರೆ. ಇಬ್ಬರೂ ಅಧಿಕಾರಿಗಳು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿರುವುದರಿಂದ ಸಿಬ್ಬಂದಿ ಈಗ ಗೊಂದಲದಲ್ಲಿದ್ದಾರೆ.
ಈ ವೇಳೆ ತೆರಳಿದ್ದ ಮಾಧ್ಯಮಗಳ ಪ್ರತಿನಿಧಿಗಳ ಮೇಲೂ ವಾಸಣ್ಣ ಗರಂ ಆಗಿದ್ದಾರೆ. ನಾವು ನಿಮ್ಮನ್ನು ಬರಲು ತಿಳಿಸಿದ್ದೇವೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.













































































































































































































































































































































































































































































































































































































































































































































































































































































































































































































































































































































