September 14, 2026
#ಜಿಲ್ಲೆ

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ

ದಾವಣಗೆರೆ: ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪಅವರು ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯನವರು, ನಮ್ಮ ಸರ್ಕಾರದಲ್ಲಿ 7 ಮಂದಿ ಲಿಂಗಾಯತರೇ ಸಚಿವರಿದ್ದಾರೆ. ನಮ್ಮ ಸರ್ಕಾರ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ನನ್ನ ಬಳಿ ಅಂಕಿಅಂಶಗಳಿವೆ ಎಂದು ತಿರುಗೇಟು ನೀಡಿದ್ದರು. ಸದ್ಯ ಈಗ ಮತ್ತೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮ್ಮದೇ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ ಎಂದಿದ್ದಾರೆ.

ಹೆಚ್ ವಿಶ್ವನಾಥಗೆ ಹುಚ್ಚಾಸ್ಪತ್ರೆಗೆ ಕಳುಹಿಸಿ

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ‌. ಒಂದು ಡಿಸಿ ಕೊಟ್ಟಿಲ್ಲ. ಈ ಬಗ್ಗೆ ಸಿಎಂ ಜೊತೆ ಮಾತಾಡುವೆ‌. ಎಲ್ಲಿ ಯಾರಿಗೆ ತೊಂದರೆ ಆಗಿದೆ ಎಂದು ಹೇಳುವೆ ಎಂದು ಶಾಮನೂರು ಶಿವಶಂಕರಪ್ಪ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ್ದಾರೆ. ಏಳು ಸಚಿವ ಸ್ಥಾನ ನೀಡಿದ್ದಾರೆ. ಅದರ ಬಗ್ಗೆ‌ ಪ್ರಶ್ನೆ ಇಲ್ಲ. ನಮ್ಮ ಲಿಂಗಾಯತ ಸಮಾಜದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಬಗ್ಗೆ ಹೇಳುತ್ತಿರುವೆ. ನಾನು ಸತ್ಯ ಹೇಳಿದ್ದೇನೆ. ಅದಕ್ಕೆ ಈ ವಿಚಾರ ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ. ಹೆಚ್ ವಿಶ್ವನಾಥಗೆ ಹುಚ್ಚಾಸ್ಪತ್ರೆಗೆ ಕಳುಹಿಸಿ. ನನ್ನ ಹೇಳಿಕೆಗೆ ಎಂಎ​ಲ್​ಸಿ ಹೆಚ್ ವಿಶ್ವನಾಥ ಹೇಳಿಕೆ ನೀಡಿದ್ದಾರೆ. ನಾನು ಸತ್ಯ ಹೇಳಿದ್ದೇನೆ.‌ ವಿಶ್ವನಾಥ ತರ ನಾನು ಯಾರಿಗೋ ಬೆಣ್ಣೆ ಹಚ್ಚಿ ಎಂಎಲ್​ಸಿ ಆಗಿಲ್ಲ.‌ ನಾನು ಜನರಿಂದ ಎಳು ಸಲ ಎಂಎಲ್​ಎ ಆಗಿರುವೆ‌. ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದೆ. ಸಿಎಂ ಹಾಗೂ ನಾನು‌ ಕುಳಿತು ಮಾತಾಡುತ್ತೇವೆ. ಎಲ್ಲಿ ಯಾರಿಗೆ ಅನ್ಯಾಯ ಆಗಿದೆ ಎಂಬುದನ್ನ ನಾನು ಸ್ಪಷ್ಟ ಪಡಿಸುವೆ ಎಂದರು.

ಹೆಚ್ ವಿಶ್ವನಾಥ್ ವಾಗ್ದಾಳಿ

ಕಾಂಗ್ರೆಸ್​ನಲ್ಲಿ ಏಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇನ್ನೆಷ್ಟು ಸ್ಥಾನ ಬೇಕಿತ್ತು ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್‌.ವಿಶ್ವನಾಥ್ ಪ್ರಶ್ನಿಸಿದ್ದಾರೆ. ನಮ್ಮಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕೋ, ಅಲ್ಲಿ ಮಾಡಿಕೊಟ್ಟಿದ್ದೇವೆ. ಲಿಂಗಾಯತರಿಗೆ ಏಳು ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಇನ್ನೆಷ್ಟು ಸ್ಥಾನ ಕೊಡಬೇಕು ನಿಮಗೆ ಎಂದು ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಹೆಚ್​.ವಿಶ್ವನಾಥ್ ತಿರುಗೇಟು ನೀಡಿದ್ದರು.

Leave a comment

Your email address will not be published. Required fields are marked *