July 29, 2026
#ಜಿಲ್ಲೆ

ಸಿಎಂ ಇಬ್ರಾಹಿಂ ಎಲ್ಲೂ ಹೋಗಲ್ಲ, ಜೆಡಿಎಸ್‌ನಲ್ಲೇ ಇರ್ತಾರೆ

ವಿಜಯಪುರ: ಸಿಎಂ ಇಬ್ರಾಹಿಂ ಜೆಡಿಎಸ್ ಬಿಡೋದಿಲ್ಲ. ಬಿಜೆಪಿ ಜೊತೆಗೆ ಹೋಗಲು ಇಬ್ರಾಹಿಂ ವಿರೋಧವಿಲ್ಲ. ಅವರೇ ಮುಂದೆ ನಿಂತು ನನ್ನ ಅಧ್ಯಕ್ಷ ಸ್ಥಾನ ಘೋಷಣೆ ಮಾಡಿದ್ದಾರೆ, ನೀವೆ ನೋಡಿದ್ದೀರಿ ಎಂದು ವಿಜಯಪುರದಲ್ಲಿ ಜೆಡಿಎಸ್ ಹಿರಿಯ ನಾಯಕ ಜಿ. ಟಿ ದೇವೆಗೌಡ ಹೇಳಿಕೆ ನೀಡಿದ್ದಾರೆ.

ಸಿ.ಎಂ ಇಬ್ರಾಹಿಂ ಜೆಡಿಎಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ ಇಬ್ರಾಹಿಂ ಅವರದ್ದು ಈಗ ಏನು ಚರ್ಚೆ ಇಲ್ಲ. ಮುಂದೆ ಒಟ್ಟಾಗಿ ಹೇಗೆ ಹೋಗಬೇಕು ಅನ್ನೋದು ಇಬ್ರಾಹಿಂ ಸಲಹೆ ಇದೆ. ದೊಡ್ಡ ಗೌಡರ ಜೊತೆಗೆ ಸಲಹೆ ಹಂಚಿಕೊಂಡಿದ್ದಾರೆ. ಬಿಜೆಪಿ ಜೊತೆಗೆ ಎಷ್ಟು ಸೀಟ್ ಹಂಚಿಕೆಯಾಗಬೇಕು, ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಸಲಹೆ ಇಬ್ರಾಹಿಂ ಅವರದ್ದು. ಬಿಜೆಪಿ ಜೊತೆ ಹೋಗಲು ಯಾವುದೇ ವಿರೋಧವಿಲ್ಲ ಎಂಬ ನಿಲುವನ್ನು ಇಬ್ರಾಹಿಂ ವ್ಯಕ್ತಪಡಿಸಿದ್ದಾರೆ ಎಂದರು. 

ಶಾಸಕರ ಅನುದಾನ ಕಡಿತ ಹಿನ್ನೆಲೆ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬಿ ಆರ್ ಪಾಟೀಲ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಭೀಕರವಾದ ಬರಗಾಲದಲ್ಲೂ ಸರ್ಕಾರ ರೈತರ ಕಡೆಗೆ ನೋಡುತ್ತಿಲ್ಲ. ರೈತರಿಗೆ ನೀಡಬೇಕಾದ ಅನುದಾನ ನೀಡತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ ಅನಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಜನರಿಗೆ ಕೊರಗು ಉಂಟಾಗಿದೆ. ಕಾಂಗ್ರೆಸ್ ತಂದು ತಪ್ಪು ಮಾಡಿದ್ದೇವೆ ಎಂದು ಜನರಿಗೆ ಮನದಟ್ಟಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. 

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತೆಗೆಯಬೇಕಿದೆ. ಇದಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಹೋಗಬೇಕು. ಮುಂದೆ ನರೇಂದ್ರ ಮೋದಿ ನಾಯಕತ್ವ ದೇಶಕ್ಕೆ ಅಗತ್ಯವಾಗಿದೆ. ಅವರನ್ನು ಉಳಿಸುವ ನಿರ್ಣಯ ಮಾಡಿದ್ದೇವೆ ಎಂದರು. ಕಾಂಗ್ರೆಸ್ ಸರ್ಕಾರದ ಬದಲಾವಣೆ ಬಗ್ಗೆ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ ಎಂಬ ಜಮೀರ್ ಅಹ್ಮದ್ ಹೇಳಿಕೆ ಕುರಿತು ಮಾತನಾಡಿದ ಅವರು, ಹಗಲುಕನಸು ನಾವು ಕಾಣುತ್ತಿಲ್ಲ. ರಾಜಣ್ಣ ಏನು ಹೇಳಿದ್ರು? ಲೋಕಸಭೆಯಲ್ಲಿ ಗೆಲ್ಲದೇ ಹೋದರೆ ರಾಜೀನಾಮೆ ಕೊಡಬೇಕು ಎಂದು ಅವರೇ ಹೇಳಿದ್ದು, ನಾವು ಹೇಳಿದ್ದಾ? ಕಾಂಗ್ರೆಸ್ ಶಾಸಕರೇ ಬಾಯಿ ಬಡ್ಕೋತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Leave a comment

Your email address will not be published. Required fields are marked *