ಬೈರತಿ ಸುರೇಶ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಚಿತ್ರದುರ್ಗ: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತೆರಳುತ್ತಿದ್ದಹೆಲಿಕಾಪ್ಟರ್ ಹಿರಿಯೂರು ತಾಲೂಕಿನ ಹಾರನಕಟ್ಟೆ ಗ್ರಾಮದ ಬಳಿ ತುರ್ತು ಭೂಸ್ಪರ್ಶ ಮಾಡಿದೆ.
ಗದಗದ ಲಕ್ಷ್ಮೇಶ್ವರದ ರಾಮಗಿರಿಯಲ್ಲಿ ಆಯೋಜನೆಗೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಳಗ್ಗೆ ಬೆಂಗಳೂರಿನ ಜಕ್ಕೂರು ಏರೋಡ್ರಂನಿಂದ ಸುರೇಶ್ ಅವರಿದ್ದ ಹೆಲಿಕಾಪ್ಟರ್ ಟೇಕಾಫ್ ಆಗಿತ್ತು.
ದಾರಿ ಮಧ್ಯೆ ತಾಂತ್ರಿಕ ಸಮಸ್ಯೆ ಕಾಣಿಸಿದ ಹಿನ್ನೆಲೆಯಲ್ಲಿ ಪೈಲೆಟ್ ಸುರಕ್ಷಿತವಾಗಿ ಹಾರನಕಟ್ಟೆ ಗ್ರಾಮದಲ್ಲಿ ಸೇಫ್ ಲ್ಯಾಂಡಿಂಗ್ ಮಾಡಿದ್ದಾರೆ. ಅಪಾಯದಿಂದ ಪಾರಾದ ಬೈರತಿ ಸುರೇಶ್ ಅವರು ರಸ್ತೆ ಮಾರ್ಗವಾಗಿ ಗದಗಕ್ಕೆ ತೆರಳಿದ್ದಾರೆ.
ಈ ವಿಷಯ ತಿಳಿದ ಹಿರಿಯೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.








































































































































































































































































































































































































































































































































































































































































































































































































































































































































































































































































































































