ನನ್ನನ್ನ ಕೆಣಕಿದ್ದೀರಿ ಪರಿಣಾಮ ಕಾದು ನೋಡಿ: ಇಬ್ರಾಹಿಂ ಎಚ್ಚರಿಕೆ
ಬೆಂಗಳೂರು: ದೇವೇಗೌಡರಿಗೆ ನನ್ನನ್ನು ತೆಗೆಯುವ ಅಧಿಕಾರ ಇಲ್ಲ. ಮೊದಲು ನನಗೆ ನೊಟೀಸ್ ಕೊಡಬೇಕು. ಕಾರ್ಯಕಾರಿ ಸಮಿತಿಯ 2/3 ಸದಸ್ಯರ ಅನುಮತಿ ಪಡೆದು ನೊಟೀಸ್ ಕೊಡಬೇಕು. ಆದ್ರೆ ದೇವೇಗೌಡರಿಗೆ ಪುತ್ರ ವ್ಯಾಮೋಹ ಇರೋದು ಸಾಬೀತಾಗಿದೆ. ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತೆ ಅಂತ ಕಾದು ನೋಡಿ ಎಂದು ಸಿ.ಎಂ ಇಬ್ರಾಹಿಂ ಎಚ್ಚರಿಕೆ ಕೊಟ್ಟಿದ್ದಾರೆ.
ಪಕ್ಷದ ಮೈತ್ರಿ ನಿರ್ಧಾರ, ಪಕ್ಷದ ನಾಯಕರ ವಿರುದ್ದ ಬಂಡೆದಿದ್ದ ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಲಾಗಿದೆ. ಈ ಕುರಿತು ಮಾತನಾಡಿದ ಅವರು, ನಾನು ಚುನಾವಣಾ ಆಯೋಗದಲ್ಲಿ ದೇವೇಗೌಡರ ನಿರ್ಧಾರವನ್ನು ಪ್ರಶ್ನೆ ಮಾಡ್ತೀನಿ. ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನ ಅನ್ಕೊಂಡಿದ್ದೆ. ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ. `ಕಾಲಾಯ ತಸ್ಮೈ ನಮಃ ವಿನಾಶ ಕಾಲೇ ವಿಪರೀತ ಬುದ್ಧಿ’ ಮಹಾಭಾರತದಲ್ಲಿ ಕೌರವರಿಗೆ ಆದ ಹಾಗೆ, ಜೆಡಿಎಸ್ಗೂ ಆಗುತ್ತೆ ಎಂದು ತಿರುಗೇಟು ನೀಡಿದ್ದಾರೆ.
ನನ್ನನ್ನ ಬೀದಿಗೆ ಎಳೆಯಬೇಡಿ:
ಇವತ್ತಿನ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಸಭೆ ನಡೆದಿದ್ದೇ ನನಗೆ ಗೊತ್ತಾಗಿಲ್ಲ. ನನ್ನನ್ನ ಬೀದಿಗೆ ಎಳೆಯಬೇಡಿ. ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಲು ನಿಮಗೆ ಏನು ಅಧಿಕಾರ ಇದೆ? ಕಂಡೋರ ಮಕ್ಕಳು ಸಿಕ್ಕಿದ್ದೀವಿ ಅಂತಾ ಹೀಗೆಲ್ಲಾ ಮಾಡೋದು ಸರಿಯಲ್ಲ ಗೌಡ್ರೆ? ನನಗೆ ಅಧಿಕಾರದ ಆಸೆ ಇಲ್ಲ ಗೌಡ್ರೇ, ಜನ ನನ್ನ ಕೈ ಹಿಡೀತಾರೆ. ಇದನ್ನ ಇಲ್ಲಿಗೆ ನಿಲ್ಲಿಸಿ, ಪಕ್ಷದಿಂದ ಉಚ್ಛಾಟನೆ ಮಾಡಿರುವ ಆದೇಶ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ.
ಜೆಡಿಎಸ್ ಪಕ್ಷ ಕುಟುಂಬದ ಸ್ವತ್ತು ಅನ್ನದನ್ನ ತೋರಿಸಿಬಿಟ್ಟಿದ್ದೀರಿ. ಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ? ನಾನು ಒಬ್ಬ ಹಿರಿಯ ನಾಯಕ, ಪರಿಷತ್ ಸದಸ್ಯ ಸ್ಥಾನ ಬಿಟ್ಟು ಬಂದಿದೀನಿ. ನನ್ನ ಜೊತೆ ಮಾತನಾಡಬೇಕು ಅಂತ ಅನಿಸಲಿಲ್ವಾ? ಚನ್ನಪಟ್ಟಣದಲ್ಲಿ ನಾನು ಹೋಗದೇ ಇದ್ದಿದ್ದರೇ ಕುಮಾರಸ್ವಾಮಿ ಗೆಲ್ತಿರಲಿಲ್ಲ. ನಾನು ಇಲ್ಲಿಗೇ ಇದನ್ನು ಬಿಡಲ್ಲ. ಜಿಲ್ಲೆ-ಜಿಲ್ಲೆಗಳಲ್ಲಿ ಸಭೆ ಮಾಡ್ತೀನಿ. ಹಾಸನದಲ್ಲಿ, ಮಂಡ್ಯದಲ್ಲಿ ಸಭೆ ಮಾಡ್ತೀನಿ. ಯಾವ ಒಕ್ಕಲಿಗರ ಮಕ್ಕಳನ್ನು ದೇವೇಗೌಡರು ಬೆಳೆಸಿದ್ದಾರೆ? ಮಹಾಭಾರತದ ನಾಟಕಾಂಕ ಶುರುವಾಗಿದೆ. ರಾತ್ರಿ ಹಗಲು ಓಡಾಡಿ ಅವರ ಮಗನನ್ನ ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ. ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡೋದಕ್ಕೆ ಆಗೋದಿಲ್ಲ. ಚುನಾವಣಾ ಆಯೋಗದಲ್ಲಿ ಇದನ್ನು ಪ್ರಶ್ನೆ ಮಾಡುತ್ತೇನೆ. ನಿಜವಾದ ಜನತಾ ದಳ ನಮ್ಮದೇ ಬಹುತೇಕ ಶಾಸಕರು ನಮ್ಮ ಜತೆ ಇದ್ದಾರೆ. ಸಮಯ ಸಂದರ್ಭ ಬಂದಾಗ ಶಾಸಕರ ಸಭೆ ಕರೀತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯರನ್ನ ಬೈಯುತ್ತಿಲ್ಲ ಅಂತ ಗೌಡರಿಗೆ ಬೇಸರ: ಶಾಸಕರನ್ನು ಎಲ್ಲ ಬಲಗಳಿಂದಲೂ ಅವರು ಹೆದರಿಸಿಕೊಂಡು ಇಟ್ಕೊಂಡಿದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ಬೈಯುತ್ತಿಲ್ಲ ಅಂತ ದೇವೇಗೌಡರಿಗೆ ಬೇಸರ ಇದೆ. ಸುಮ್ಮಸುಮ್ಮನೆ ನಾನ್ಯಾಕೆ ಸಿದ್ದರಾಮಯ್ಯರನ್ನು ಬೈಯಲಿ? ಸಿದ್ದರಾಮಯ್ಯ ಜತೆ ಯಾವುದೇ ವೈಷಮ್ಯ ಇಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡ್ತಿದ್ದಾರೆ. ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನಿಸಿಲ್ಲ. ನನ್ನ ಹೋರಾಟ ಶುರುವಾಗಿದೆ. ಅವರ ನೊಟೀಸ್ ನನ್ನ ಕೈಗೆ ಬರಲಿ. ಇವತ್ತು ಗುರುವಾರ, ನಾನು ಉಪವಾಸ ಇದೀನಿ. ಇದೇ ಗುರುವಾರ ಹುಬ್ಬಳ್ಳಿ ಈದ್ಗಾ ಮೈದಾನ ಗಲಾಟೆ ವೇಳೆ ನನ್ನ ಮಗ ಸತ್ತ. ನನ್ನ ಮಗ ಸತ್ತರೂ ನಿಮ್ಮ ಪರ ನಿಂತಿದ್ದೆ ನಾನು, ನನ್ನನ್ನು ತೆಗೆದಿರಿ ಸರಿ, ನನ್ನ ಬದಲು ಜಿ.ಟಿ ದೇವೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತಲ್ಲಾ? ಮತ್ತೆ ಕುಮಾರಸ್ವಾಮಿ ಅವರನ್ನೇ ಆಯ್ಕೆ ಮಾಡಿ ಪುತ್ರ ವ್ಯಾಮೋಹ ತೋರಿಸಿದ್ದೀರಿ ಎಂದು ತಿವಿದಿದ್ದಾರೆ.








































































































































































































































































































































































































































































































































































































































































































































































































































































































































































































































































































































