ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿ ಕೆರೆ ಸೀಜ್
ಬೆಂಗಳೂರು: ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಕೆರೆಯೊಂದನ್ನು ಸೀಜ್ ಮಾಡಲಾಗಿದೆ. ಕೆರೆಯ ಒಳಗೆ ಪ್ರವೇಶಿಸುವ ಮಾರ್ಗಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ.
ಖಾಸಗಿ ಕಂಪನಿಯೊಂದರಿಂದ ಜಿಗಣಿಯ ಹೆನ್ನಾಗರ ಕೆರೆ ಒತ್ತುವರಿ ಕಾರ್ಯ ನಡೆಯುತ್ತಿತ್ತು. ಕೆರೆ ಒಳಗಡೆ ಮಣ್ಣು ಹಾಕಿ ಮುಚ್ಚಲು ಯತ್ನಿಸಲಾಗುತ್ತಿತ್ತು. ಹೆನ್ನಾಗರ ಕೆರೆ ಒತ್ತುವರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಆನೇಕಲ್ ತಹಶೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರು ನೀಡಿದ ಬಳಿಕ ಕೆರೆ ಒತ್ತುವರಿ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಲಾರಿಗಳಲ್ಲಿ ಮಣ್ಣನ್ನು ಕೊಂಡೊಯ್ದು ಮುಚ್ಚಲು ಯತ್ನಿಸುತ್ತಿದ್ದವರನ್ನು ತಡೆಯಲಾಗಿದೆ. ಈಗ ಒಳಗಡೆ ಯಾವುದೇ ವಾಹನ ಪ್ರವೇಶ ಮಾಡದಂತೆ ಕೆರೆಯ ಪ್ರವೇಶ ದ್ವಾರಗಳನ್ನು ಬ್ಯಾರಿಕೇಡ್ ಹಾಗೂ ಕಬ್ಬಿಣದ ಸರಳುಗಳನ್ನು ಹಾಕಿ ಬಂದ್ ಮಾಡಲಾಗಿದೆ.
ತಹಶೀಲ್ದಾರ್ ದೂರಿನ ಅನ್ವಯ ಜಿಗಣಿ ಪೊಲೀಸ್ ಠಾಣೆ ಪೊಲೀಸರು ಕೆರೆಯ ಪ್ರವೇಶದ್ವಾರಗಳನ್ನು ಮುಚ್ಚಿದ್ದಾರೆ. ಒತ್ತುವರಿ ಮಾಡುತ್ತಿದ್ದ ವೀಡಿಯೋ ಆಧರಿಸಿ ತಹಶೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.













































































































































































































































































































































































































































































































































































































































































































































































































































































































































































































































































































































