September 14, 2026
#ಜಿಲ್ಲೆ

ಬೆಳಗಾವಿಯಲ್ಲಿ ಬಿಜೆಪಿ ಸಂಘರ್ಷ ಜೋರು

ಬೆಳಗಾವಿ:
ಲೋಕಸಭಾ ಚುನಾವಣೆ ಸಿದ್ಧತೆ ನಡೆಸುತ್ತಿರುವ ಬಿಜೆಪಿಗೆ ಬೆಳಗಾವಿ ಭಿನ್ನಮತ ಬಿಸಿ ತುಪ್ಪವಾಗಿದೆ. ಕ್ಷೇತ್ರವಾರು ನಡೆದ ಬಿಜೆಪಿ ಸಭೆಯಲ್ಲಿ ಮೂಲ ವರ್ಸಸ್ ವಲಸಿಗರ ಸಂಘರ್ಷ ಜೋರಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮೂಲ ಬಿಜೆಪಿಗರು ಸಿಡಿದೆದ್ದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿಗೆ ಚುನಾವಣೆ ಹೊಣೆ ಹೊರೆಸಲಾಗಿತ್ತು. ಪರಿಣಾಮ ಜಿಲ್ಲೆಯ 13 ಕ್ಷೇತ್ರಗಳಲ್ಲಿದ್ದ ಬಿಜೆಪಿ ಶಾಸಕರ ಸಂಖ್ಯೆ ೭ಕ್ಕೆ ಇಳಿದಿದೆ. ಕಾಂಗ್ರೆಸ್ ೫ ಕ್ಷೇತ್ರಗಳಿಂದ 11 ಕ್ಷೇತ್ರಗಳಿಗೆ ಸಂಖ್ಯೆ ಹೆಚ್ಚಿಸಿಕೊಂಡಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಜಾರಕಿಹೊಳಿ ಮಾತು ಕೇಳಬೇಡಿ. ಜಿಲ್ಲೆಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನ ಮಾಡುವಂತೆ ಆಗ್ರಹಿಸಿದ್ದಾರೆ.
ಮೊದಲು ಜಿಲ್ಲಾ ಮಟ್ಟದಲ್ಲಿ ಒಗ್ಗಟ್ಟು ಮೂಡಿಸಿ ಎಂದು ಕೆಲ ನಾಯಕರು ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ನಾಯಕರ ಸಲಹೆ ಪಡೆದು ಚುನಾವಣಾ ತಂತ್ರಗಾರಿಕೆ ಮಾಡಬೇಕು.ಯಾರದ್ದೋ ಒಬ್ಬರ ಮಾತು ಕೇಳಿ ಜಿಲ್ಲೆಯ ಜವಾಬ್ದಾರಿ ಕೊಡಬೇಡಿ ಎಂದಿದ್ದಾರೆ.
ಪಕ್ಷದ ಕಾರ್ಯಕರ್ತರ ಅಭಿಪ್ರಾಯದಂತೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಾಗುತ್ತಿದೆ. ಅದು ನಮಗೆ ಮುಳುವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಬರುವ ಎರಡು ಕ್ಷೇತ್ರಗಳು ಗೆಲ್ಲಬೇಕು ಅಂದರೆ ಒಗ್ಗಟ್ಟು ಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯರ ಸಭೆ ಕರೆಯಿರಿ ಎಂದು ಬೆಳಗಾವಿ ಭಾಗದ ಮುಖಂಡರು ಒತ್ತಾಯಿಸಿರುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಇದೀಗ ಬೆಳಗಾವಿ ಆಂತರಿಕ ಸಂಘರ್ಷವನ್ನು ಹೈಕಮಾಂಡ್ ಅಂಗಳಕ್ಕೆ ತಲುಪಿಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದಾಗಿದ್ದಾರೆ.

Leave a comment

Your email address will not be published. Required fields are marked *