July 29, 2026
#ಬೆಂಗಳೂರು

ಕಾಂಗ್ರೆಸ್ ಗ್ಯಾರಂಟಿಗಳಿಗೆ ಬಿಜೆಪಿ ಕೌಂಟರ್ ಕೊಡಲು ಸಿದ್ಧತೆ; ಮೋದಿ ಗ್ಯಾರಂಟಿ ಪ್ರಚಾರಕ್ಕೆ ಸೂಚನೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಪ್ಲಾನ್ ಮಾಡಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಲು ತಂತ್ರಗಾರಿಕೆ ಮಾಡಲಾಗುತ್ತಿದ್ದು, ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಿನ್ನೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು  ಕೌಂಟರ್ ಮಾಡುವುದು ಹೇಗೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಗ್ಯಾರಂಟಿ ವರ್ಸಸ್ ಮೋದಿ ಗ್ಯಾರಂಟಿ ನಡೆಯುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯಾದ್ಯಂತ ಕಾಂಗ್ರೆಸ್ ಗ್ಯಾರಂಟಿಗಳ ಜೊತೆಗೆ ಮೋದಿ ಗ್ಯಾರಂಟಿ ಜಾಹೀರಾತುಗಳು ಕೂಡ ಕಾಣಸಿಗುತ್ತಿವೆ. ಅಲ್ಲದೆ, ಕೇಂದ್ರ ಸರ್ಕಾರದ ಯೋಜನೆಗಳನ್ನೇ ಹೆಚ್ಚು ಪ್ರಚುರ ಪಡಿಸಿ ಮೋದಿಯೇ ಗ್ಯಾರಂಟಿ ಎಂದು ಬಿಂಬಿಸಲು ಬಿಜೆಪಿ ಮುಂದಾಗಿದೆ.

ಕೇಂದ್ರ ಯೋಜನೆಗಳ ಫಲಾನುಭವಿಗಳ ಬಳಿ ತೆರಳಿ ಮೋದಿ ಗ್ಯಾರಂಟಿ ಎಂದು ಬಿಂಬಿಸಲು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ರಾಜ್ಯ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನದಲ್ಲಿನ ಸಮಸ್ಯೆಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಯಶಸ್ವಿ ಅನುಷ್ಠಾನವನ್ನು ಜನರಿಗೆ ಮನವರಿಕೆ ಮಾಡಲು ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಘೋಷಣೆಗಳು ಗ್ಯಾರಂಟಿಯಲ್ಲ, ಇನ್ನೂ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ, ಮೋದಿ ಸರ್ಕಾರದ ಯೋಜನೆಗಳು ಮತ್ತು ಅದರಿಂದ ಪ್ರಯೋಜನ ಪಡೆಯುತ್ತಿರುವ ಫಲಾನುಭವಿಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ವರ್ಡ್ಸ್ ಅಫ್ ಮೌತ್ ಕ್ಯಾಂಪೇನ್​ಗೆ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.

ದಳ ಮಂಡ್ಯ ಲೋಕಸಭಾ ಅಭ್ಯರ್ಥಿ ಯಾರು?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ನಿಖಿಲ್ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿಯೊಂದಿಗೆ ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಗೆಲುವಿನ ಹಾದಿ ಸುಗಮ ಅನ್ನೋ ಲೆಕ್ಕಾಚಾರದಿಂದ ಮಾಜಿ ಮತ್ತು ಹಾಲಿ ಶಾಸಕರು ನಿಖಿಲ್ ಸ್ಪರ್ಧೆ ಮಾಡಲು ಒತ್ತಡ ಹಾಕಿದ್ದರು.

ಸಾಕಷ್ಟು ಒತ್ತಡವಿದ್ದರೂ ಮಂಡ್ಯ ಲೋಕಸಭಾ ಸ್ಪರ್ಧೆಯಿಂದ ನಿಖಿಲ್ ದೂರ ಉಳಿದಿದ್ದಾರೆ. ಸ್ವರ್ಧೆ ಬದಲು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಓಡಾಟ ನಡೆಸಲು ನಿರ್ಧರಿಸಿದ್ದಾರೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿ ರಾಜ್ಯದಲ್ಲಿ ಹೆಚ್ಚು ಜೆಡಿಎಸ್ ಬಿಜೆಪಿ ಸ್ಥಾನ ಬರುವಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದಾರೆ.

ಒಟ್ಟಾರೆಯಾಗಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿರುವ ಸುಮಲತಾ ಅವರಿಗೇ ಟಿಕೆಟ್ ಸಿಗುತ್ತಾ ಅಥವಾ ಅವರಿಗೆ ಬೇರೆ ಕ್ಷೇತ್ರದ ಟಿಕೆಟ್ ಕೊಟ್ಟು ಈ ಕ್ಷೇತ್ರದಲ್ಲಿ ಹೊಸ ಮುಖವನ್ನು ಇಳಿಸಲಾಗುತ್ತಾ ಎಂಬುದೀಗ ಪ್ರಶ್ನೆಯಾಗಿದೆ.

Leave a comment

Your email address will not be published. Required fields are marked *