September 13, 2026
#ಜಿಲ್ಲೆ

ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ

ಹಾಸನ: 2024ರ ಲೋಕಸಭಾ ಚುನಾವಣಾ (Lok Sabha Elections) ದೃಷ್ಟಿಯಿಂದ ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಹಾಸನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸರ್ಕಾರ ಆರಂಭಿಕ ಹಂತದಲ್ಲೇ ಮುಗ್ಗರಿಸಿದೆ. ಟ್ರಿಬ್ಯೂನಲ್ (ನ್ಯಾಯಾಧಿಕರಣ) ಮುಂದೆ ನೀರಿಲ್ಲ ಅನ್ನುತ್ತಾರೆ, ಹೊರಗೆ ಬಂದು ಒಳಹರಿವು 10,000 ಕ್ಯೂಸೆಕ್ ಇದೆ ಅಂತ ಹೇಳ್ತಿದ್ದಾರೆ. CWRC ತೀರ್ಪು ಬರುಬ ಮುಂಚೆಯೇ ಒಳಹರಿವಿನ ಬಗ್ಗೆ ಹೇಳ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ನೀರಾವರಿ ಸಲಹಾ ಸಮಿತಿ ಸಭೆ ಕರೆಯದೇ ತಮಿಳುನಾಡಿಗೆ ನೀರು ಹರಿಸಿದ್ದಾರೆ. ತಮಿಳುನಾಡಿನವರಿಗೆ ಕೀ ಕೊಟ್ಟು ಇವರು ಏನು ತೀರ್ಮಾನ ಮಾಡ್ತಾರೆ? ಕುಡಿಯಲು ನೀರಿಲ್ಲ ಎಂದು ಜನ ದಂಗೆ ಏಳುತ್ತಿದಾರೆ. 4 ತಿಂಗಳು ಗ್ಯಾರಂಟಿ ಕೊಡಲು ಹೋಗಿ ನೀರು ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲ ಕಡೆ ಗ್ಯಾರಂಟಿ ಕೊಡಲು ಲಕ್ಷಾಂತರ ಜನರನ್ನ ಸೇರಿಸಿ ಸರ್ಕಾರದ ಹಣ ಖರ್ಚು ಮಾಡಿದ್ದಾರೆ. ಆದ್ದರಿಂದ ರಾಜ್ಯದ ಹಿತದೃಷ್ಟಿಯಿಂದ, ನೆಲ-ಜಲಕ್ಕೋಸ್ಕರ ಯಾವುದೇ ಸಂಘಟನೆ ಬಂದ್ ಮಾಡಿದ್ರು ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ. 

ಅಲ್ಲದೇ 135 ಶಾಸಕರು ಸಾಕಾಗಲ್ಲ ಅಂತ ಕೆಲವು ಪಕ್ಷಗಳ ಮುಖಂಡರನ್ನ ಸೆಳೆಯುವಲ್ಲಿ ಕೆಲವರು ಮಗ್ನರಾಗಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಬೇರೆ ಪಕ್ಷದವರನ್ನು ಸೆಳೆಯುತ್ತಿದ್ದಾರೆ. ಮುಂದಿನ ಚುನಾವಣೆವರೆಗೂ ಕರ್ನಾಟಕ ಸರ್ಕಾರ, ತಮಿಳುನಾಡಿನ ಸರ್ಕಾರದ ಪಾದಕ್ಕೆ ರಾಜ್ಯವನ್ನ ಅಡ ಇಟ್ಟಿದ್ದಾರೆ. ತಮಿಳುನಾಡು ಸರ್ಕಾರ ಕರ್ನಾಟಕದಲ್ಲಿ ನೀರಿನ ವಿಚಾರದಲ್ಲಿ `ಆಪರೇಷನ್ ಐಎನ್‌ಡಿಐಎ’ ಮಾಡುತ್ತಿದೆ. ಇದರಿಂದ ಕರ್ನಾಟಕದ ರೈತರ ಮನೆ ಹಾಳಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ ಜೊತೆ ಸೇರಿದರೂ ನಮ್ಮ ಸಿದ್ಧಾಂತ ಬಿಡಲ್ಲ. ಕಾಂಗ್ರೆಸ್‌ನವರು ಬೇಕಾದಾಗ ನಮ್ಮ ಹತ್ರ ಕೋಮುವಾದಿ ದೂರ ಇಡಬೇಕು ಅಂತ ಬರ್ತಾರೆ. ಅಧಿಕಾರ ಬಂದ ಮೇಲೆ ನಮ್ಮನ್ನ ಯಾವ ರೀತಿ ಟ್ರೀಟ್ ಮಾಡ್ತಿದ್ದಾರೆ ಎಂದು ಸಮಯ ಬಂದಾಗ ಹೇಳ್ತಿನಿ ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *