ಹಾಸನ, ಕೋಲಾರದಲ್ಲಿ ತೀವ್ರಗೊಂಡ ಪ್ರತಿಭಟನೆ; ಸರ್ಕಾರಿ ಬಸ್ ಸಂಚಾರಕ್ಕೆ ಹೋರಾಟಗಾರರಿಂದ ತಡೆ!
ಹಾಸನ: ಕಾವೇರಿ ನದಿ ನೀರಿಗಾಗಿ ಇಂದು ರೈತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಿವೆ. ಬೆಂಗಳೂರು ಸೇರಿದಂತೆ ಹತ್ತಾರು ಜಿಲ್ಲೆಗಳಲ್ಲಿ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತವಾಗಿದೆ.
ಈ ಮಧ್ಯೆ ಹಾಸನದಲ್ಲಿ ಕೂಡ ಹೋರಾಟಗಾರರು ಬಂದ್ ನಡೆಸುವಂತೆ ಪಟ್ಟು ಹಿಡಿದಿದ್ದು ಈ ವೇಳೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದ ಘಟನೆ ನಡೆದಿದೆ. ಬಂದ್ ಇದ್ದರೂ ಜನಸಾಮಾನ್ಯರು ಲೆಕ್ಕಿಸದೆ ತಮ್ಮ ಎಂದಿನ ಕಾರ್ಯದಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದರು. ಬಸ್ ಸಂಚಾರ ಕೂಡ ಸಹಜವಾಗಿಯೇ ಇತ್ತು. ಈ ವೇಳೆ ಬಸ್ ಹತ್ತದಂತೆ ಹೋರಾಟಗಾರರು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.
ಪ್ರಯಾಣಿಕರಿಗೆ ಮತ್ತು ಬಸ್ ಚಾಲಕರಿಗೂ ಬಸ್ ಸಂಚರಿಸದಂತೆ ಹೋರಾಟಗಾರರು ಮನವಿ ಮಾಡಿದರು. ಈ ವೇಳೆ ಪ್ರಯಾಣಿಕರಿಗೆ ಬಸ್ನಲ್ಲಿ ಪ್ರಯಾಣಿಸುವಂತೆ ಪೊಲೀಸರು ಧೈರ್ಯ ತುಂಬಿದರು. ಅತ್ತ ಪೊಲೀಸರ ಭರವಸೆ ಮೇರೆಗೆ ಪ್ರಯಾಣಿಕರು ಬಸ್ ಹತ್ತಿ ಪ್ರಯಾಣಿಸಲು ಮುಂದಾದಾಗ ಹೋರಾಟಗಾರರು ತಡೆದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ಉಂಟಾಯಿತು.
ಪೊಲೀಸರ ಬೆಂಬಲದೊಂದಿಗೆ ಸಾರಿಗೆ ಬಸ್ ಗಳು ಸಂಚಾರಕ್ಕೆ ಮುಂದಾಗಿದ್ದು, ಸದ್ಯ ಹಾಸನದಲ್ಲಿ ತಾತ್ಕಾಲಿಕವಾಗಿ ಬಸ್ ಸಂಚಾರ ಆರಂಭಗೊಂಡಿದೆ. ಆದರೆ ಪ್ರತಿಭಟನೆ ತೀವ್ರಗೊಂಡರೆ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಇತ್ತ ಕೋಲಾರದಲ್ಲಿ ಕೂಡ ಕಾವೇರಿ ಪರ ಹೋರಾಟ ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಸರ್ಕಾರಿ ಬಸ್ ಗಳನ್ನ ತಡೆದು ವಾಪಾಸ್ ಕಳಿಸಿ ಕರ್ನಾಟಕ ಬಂದ್ ನಡೆಸುವಂತೆ ಆಗ್ರಹಿಸಿದ್ದಾರೆ. ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಲಾಗಿದ್ದು, ಪ್ರಗತಿ ಪರ ಸಂಘಟನೆಗಳಿಂದ ಕೋಲಾರ ಬಸ್ ಡಿಪೋಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಇನ್ನು ಚಾಮರಾಜನಗರ ಜಿಲ್ಲೆಯಲ್ಲೂ ಕರ್ನಾಟಕ ಬಂದ್ ಬಿಸಿ ಜೋರಾಗಿಯೇ ತಟ್ಟಿದ್ದು, ಚಾಮರಾಜನಗರ ಇಂದು ಮುಂಜಾನೆಯಿಂದಲೇ ಸಂಪೂರ್ಣ ಸ್ತಬ್ದಗೊಂಡಿದೆ. ತಮಿಳುನಾಡಿಗೆ ಸಂಚರಿಸುವ ಬಸ್ಗಳ ಸಂಚಾರ ಸ್ಥಗಿತಗೊಂಡಿದ್ದು, ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ 5 ಚೆಕ್ ಪೋಸ್ಟ್ಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ತಮಿಳುನಾಡಿನಿಂದ ಕರ್ನಾಟಕಕ್ಕೆ ಬರಬೇಕಿದ್ದ ತಮಿಳುನಾಡು ಸಾರಿಗೆ ಬಸ್ಗಳು ಕೂಡ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಚಾಮರಾಜನಗರ ತಾಲೂಕಿನ ಪುಣಜನೂರು, ಗುಂಡ್ಲುಪೇಟೆ ತಾಲೂಕಿನ ಕೆಕ್ಕನಹಳ್ಳ, ಹನೂರು ತಾಲೂಕಿನ ಅರ್ಧನಾರೀಪುರ, ನಾಲ್ ರೋಡ್, ಪಾಲಾರ್ ಚೆಕ್ ಪೋಸ್ಟ್ ನಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.
ಕೆಲ ಜಿಲ್ಲೆಗಳಲ್ಲಿ ಬಂದ್ಗೆ ತಟ್ಟದ ಬಿಸಿ
ಇನ್ನು ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಅನೇಕ ಜಿಲ್ಲೆಗಳಲ್ಲಿ ಬಂದ್ಗೆ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜನಜೀವನ ಎಂದಿನಂತೆ ಇದ್ದು, ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದಿವೆ. ಕರಾವಳಿ ಭಾಗದಲ್ಲಿ ಕನಿಷ್ಟ ಸಾಂಕೇತಿಕವಾಗಿಯೂ ಬಂದ್ಗೆ ಬೆಂಬಲ ವ್ಯಕ್ತವಾಗಿಲ್ಲ. ಹಾವೇರಿಯಲ್ಲಿ ಕೂಡ ಬಂದ್ ಎಪೆಕ್ಟ್ ತಟ್ಟಿಲ್ಲ, ದಾವಣಗೇರಿ, ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಬಸ್ಗಳ ಓಡಾಟ ಶುರುವಾಗಿದ್ದು, ಜನಜೀವನ ಎಂದಿನಂತೆ ಆರಂಭಗೊಂಡಿದೆ.









































































































































































































































































































































































































































































































































































































































































































































































































































































































































































































































































































































