ಕಾರವಾರದಲ್ಲಿ ಮತಾಂತರ ಮಾಡಲು ಯತ್ನಿಸಿದ: ಆರು ಮಂದಿ ಬಂಧನ
ಕಾರವಾರ:
ಮತಾಂತರ ಮಾಡಲು ಬಂದಿದ್ದ ಆರು ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಜಿಲ್ಲೆಯ ಶಿರಸಿ ತಾಲೂಕಿನ ಜಗಳಮನೆ ಗ್ರಾಮದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಪರಮೇಶ್ವ ನಾಯ್ಕ್, ಸುನೀತಾ ನಾಯ್ಕ್, ಧನಂಜಯ್ ಶಿವಣ್ಣ, ಶಾಲಿನಿ ರಾಣಿ, ಮುಂಡಗೊಡ ತಾಲೂಕಿನ ಕುಮಾರ ಲಮ್ಮಾಣಿ, ತಾರಾ ಲಮ್ಮಾಣಿ ಮತಾಂತರ ಮಾಡಲು ಬಂದಿದ್ದ ಆರೋಪಿಗಳು. ಜಗಳಮನೆ ಗ್ರಾಮದ ಆದರ್ಶ ನಾಯ್ಕ ಎಂಬವರ ಮನೆಗೆ ತಂಡ ಬಂದಿತ್ತು.
ತಾಲೂಕಿನ ಜಗಳಮನೆ ಗ್ರಾಮದಲ್ಲಿ ಆರೋಪಿಗಳು ಗ್ರಾಮದ ಜನರನ್ನು ಮತಾಂತರ ಮಾಡಲು ಬಂದಿದ್ದಾರೆ. ಆದರ್ಶ ಎಂಬವರ ಮನೆಗೆ ಹೋಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಮನೆಯವರಿಗೆ ಆರೋಗ್ಯ ಸರಿ ಹೋಗಬೇಕು ಎಂದರೆ ಕ್ರೈಸ್ತ ಧರ್ಮವನ್ನು ಸ್ವೀಕಾರ ಮಾಡಿ ಎಂದು ಮನವೊಲಿಸಿದ್ದಾರೆ. ಏಸು ಕ್ರಿಸ್ತ ನಿಮಗೆ ಎಲ್ಲವನ್ನು ಕೊಡುತ್ತಾನೆ. ನಿಮಗೆ ಇರುವ ಎಲ್ಲಾ ಕಷ್ಟಗಳು ದೂರ ಆಗುತ್ತೆ. ನಾವು ಕೂಡ ಮತಾಂತರ ಆಗಿದ್ದೇವೆ ಎಂದು ಹೇಳುತ್ತಾ ಆರು ಜನರು ಮನವೊಲಿಸಿದ್ದಾರೆ.
ಇದನ್ನು ಗಮನಿಸಿದ ಆದರ್ಶ ನಾಯ್ಕ ಘಟನೆ ಕುರಿತು ಶಿರಸಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಜನರ ಮನವೊಲಿಸಲು ಪ್ರಯತ್ನಿಸುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.







































































































































































































































































































































































































































































































































































































































































































































































































































































































































































































































































































































