July 29, 2026
#ಬೆಂಗಳೂರು

ಅವಧಿ ಮೀರಿ ಜೆಟ್ ಲ್ಯಾಗ್ ಪಬ್ ಓಪನ್ಪೊಲೀಸರಿಗೆ ನೋಟಿಸ್

ಬೆಂಗಳೂರು:
ಅವಧಿ ಮೀರಿ ಪಬ್ ತೆರೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಅವರು ಮಲ್ಲೇಶ್ವರಂ ಠಾಣೆಯ ಎಸಿಪಿಗೆ ಆದೇಶಿಸಿದ್ದಾರೆ. ಅದರಂತೆ ಮಲ್ಲೇಶ್ವರಂ ಠಾಣೆಯ ಎಸಿಪಿ ಸುಬ್ರಹ್ಮಣ್ಯ ನಗರ ಠಾಣೆಯ ಆರು ಜನ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ. ಠಾಣಾಧಿಕಾರಿ, ಸಬ್ ಇನ್ಸ್ಪೆಕ್ಟರ್, ನಾಲ್ವರು ಕಾನ್ಸ್ಟೇಬಲ್‌ಗಳಿಗೆ ನೋಟಿಸ್ ನೀಡಲಾಗಿದೆ.
ಜನವರಿ 3 ರಂದು ಮಧ್ಯರಾತ್ರಿ ಕಳೆದು ಮರುದಿನ ಬೆಳಗಿನ ಜಾವದವರೆಗೆ ಪಾರ್ಟಿ ಯಾವ ರೀತಿ ನಡೆದಿತ್ತು. ಯಾರೆಲ್ಲಾ ಬಂದಿದ್ದರು, ಅವಧಿ ಮೀರಿ ಪಬ್ ತೆರೆಯಲು ಅವಕಾಶ ನೀಡಿದ್ದೇಕೆ. ಘಟನೆ ಬಳೆಕಿಗೆ ಬಂದರೂ ಕ್ರಮ ಏಕೆ ಕೈಗೊಂಡಿಲ್ಲ ಎಂದು ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಏನಿದು ಘಟನೆ
ಕಾಟೇರ ಸಿನಿಮಾ ರಿಲೀಸ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಸಕ್ಸಸ್ ಸೆಲೆಬ್ರೇಷನ್ ಬಳಿಕ ದರ್ಶನ್, ಅಭಿಷೇಕ್ ಅಂಬರೀಷ್, ಧನಂಜಯ್ ಸೇರಿ ಅನೇಕರು ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು. ಜನವರಿ 3 ರಂದು ಮಧ್ಯರಾತ್ರಿ ಕಳೆದು ಮರುದಿನ ಬೆಳಗಿನ ಜಾವ 3.15ರ ವರೆಗೆ ಪಾರ್ಟಿ ಮಾಡಿದ್ದರು.
ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಇಡಲು ಅವಕಾಶ ಇದೆ. ಆದರೆ, ನಿಯಮವನ್ನು ಇಲ್ಲಿ ಮೀರಲಾಗಿದೆ. ಹೀಗಾಗಿ ಪಬ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್, ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಸುಭ್ರಮಣ್ಯ ನಗರ ಠಾಣೆ ಪೊಲೀಸರು ಜಾರಿ ಮಾಡಿದ್ದಾರೆ. ನಟರಾದ ಡಾಲಿ ಧನಂಜಯ್, ಚಿಕ್ಕಣ್ಣ, ನಿನಾಸಂ ಸತೀಶ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರಿಗೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Leave a comment

Your email address will not be published. Required fields are marked *