September 12, 2026
#ಬೆಂಗಳೂರು

ಶಾಲೆಯಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸಿದರೆ ತಪ್ಪಿಲ್ಲ

ಬೆಂಗಳೂರು:
ವಿದ್ಯಾರ್ಥಿಗಳ ಕೈಯಲ್ಲಿ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ವಿಚಾರ ಇತ್ತೀಚೆಗೆ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ನಂತರ ಹೊಸ ನಿಯಮವನ್ನೂ ರೂಪಿಸಲಾಗಿತ್ತು. ಇದಕ್ಕೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಸ ಗುಡಿಸುವುದರಲ್ಲಿ, ಅಗತ್ಯ ಸಾಧನಗಳನ್ನು ಬಳಸಿಕೊಂಡು ಶೌಚಾಲಯ ಸ್ವಚ್ಛಗೊಳಿಸಿರುವುದರಲ್ಲಿ ತಪ್ಪಿಲ್ಲ. ಇಂಥ ಕೆಲಸಗಳನ್ನು ಚಿಕ್ಕಂದಿನಲ್ಲೇ ತಿಳಿದುಕೊಳ್ಳುವುದು ಉತ್ತಮ. ಇದೂ ಸಹ ಶಿಕ್ಷಣದ ಒಂದು ಭಾಗ ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ, ಕಸ ಗುಡಿಸುವುದಕ್ಕೆಂದೇ ಪ್ರತ್ಯೇಕ ಸಿಬ್ಬಂದಿ ಇರುವುದಿಲ್ಲ. ವಿದ್ಯಾರ್ಥಿಗಳು ಆ ಕೆಲಸ ಮಾಡುವುದು ಸಹಜ. ಕೈಗವಸು ಹಾಕಿ ಬ್ರಷ್ ಬಳಸಿ ಶೌಚಾಲಯ ಸ್ವಚ್ಛಗೊಳಿಸಿವುದು ತಪ್ಪಲ್ಲ. ಸಣ್ಣವನಿದ್ದಾಗ ನಾನೂ ಆ ಕೆಲಸ ಮಾಡಿದ್ದೆ ಎಂದು ಖಾದರ್ ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಹಾಸನದಲ್ಲಿ ಶನಿವಾರ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಕೆಎನ್ ರಾಜಣ್ಣ, ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ಯುಟಿ ಖಾದರ್ ಹಾಗೆ ಹೇಳಿರಬಹುದು. ಅದು ಅವರ ಅಭಿಪ್ರಾಯ. ಆದರೆ ಮನುಷ್ಯತ್ವದ ದೃಷ್ಟಿಯಿಂದ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಅಮಾನವೀಯ ನಡೆ ಎಂದು ರಾಜಣ್ಣ ಹೇಳಿದ್ದಾರೆ.
ಬೆಂಗಳೂರು, ಶಿವಮೊಗ್ಗ ಮತ್ತು ಕೋಲಾರ ಜಿಲ್ಲೆಗಳಲ್ಲಿ ಶಾಲೆ ಮಕ್ಕಳಿಂದ ಶೌಚಾಯಲ ಸ್ವಚ್ಛಗೊಳಿಸಿದ ಪ್ರಕರಣಗಳಿ ಬೆಳಕಿಗೆ ಬಂದಿವೆ. ಮತ್ತೊಂದೆಡೆ ಶಾಲೆಯಲ್ಲಿ ಸ್ವಚ್ಛ ಮಾಡುವವರಿಲ್ಲ ಎನ್ನುವ ಆರೋಪಗಳು ಶಿಕ್ಷಕರಿಂದ ಬಂದಿವೆ. ಇದರಿಂದ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ, ಶಾಲೆ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಎಸ್‌ಡಿಎಂಸಿ ಸಮಿತಿಗೆ ನೀಡುವ ತೀರ್ಮಾನ ಕೈಗೊಂಡ ಬಗ್ಗೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು.

Leave a comment

Your email address will not be published. Required fields are marked *