ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ: 141 ಸಂಸದರ ಅಮಾನತಿಗೆ ಸೋನಿಯಾ ಗಾಂಧಿ ಕಿಡಿ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಶಿಸ್ತಿನ ನಡವಳಿಕೆ ಹಿನ್ನೆಲೆ 141 ಸಂಸದರನ್ನು ಅಮಾನತುಗೊಳಿಸಿದ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದು, ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ 141 ಸಂಸದರನ್ನು ಸರ್ಕಾರ ಅಮಾನತುಗೊಳಿಸಿರುವುದನ್ನು ಖಂಡಿಸಿದ ಅವರು, ಸಂಪೂರ್ಣವಾಗಿ ಸಮಂಜಸವಾದ ಮತ್ತು ನ್ಯಾಯಸಮ್ಮತವಾದ ಬೇಡಿಕೆಗೆ ಒತ್ತಾಯಿಸಿದ್ದಕ್ಕಾಗಿ ಹಿಂದೆಂದೂ ಇಷ್ಟು ವಿರೋಧ ಪಕ್ಷದ ಸಂಸದರನ್ನು ಸದನದಿಂದ ಅಮಾನತುಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿಸೆಂಬರ್ 13ರಂದು ಸಂಸತ್ ಭವನದಲ್ಲಿ ನಡೆದ ಭದ್ರತಾ ಉಲ್ಲಂಘನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಹೇಳಿಕೆ ನೀಡುವಂತೆ ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ. ಭದ್ರತಾ ಲೋಪದ ಕುರಿತು ಅಮಿತ್ ಶಾ ಹೇಳಿಕೆ ಕೊಡಬೇಕಾಗಿತ್ತು ಎಂದು ಸಂಸದರನ್ನು ಬೆಂಬಲಿಸಿದರು.













































































































































































































































































































































































































































































































































































































































































































































































































































































































































































































































































































































