ಮದುವೆಯಾಗೋದಾಗಿ ಹೇಳಿ ಪ್ರಭು ಚೌಹಾಣ್ ಪುತ್ರನಿಂದ ವಂಚನೆ?
ಬೀದರ್: ಮಾಜಿ ಸಚಿವ ಪ್ರಭು ಚೌಹಾಣ್ 26 ಎಕರೆ ಜಮೀನನ್ನು ಖರೀದಿಸಿದ್ದು, ಹಣ ಕೇಳಿದರೆ ಸಂಬಂಧ ಬೆಳೆಸುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ಗಂಗಾಧರ್ ರಾಥೋಡ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಗಂಗಾಧರ್ ಕುಟುಂಬಸ್ಥರು, ಪುತ್ರ ಪ್ರತೀಕ್ ಜೊತೆ ಗಂಗಾಧರ್ ರಾಥೋಡ್ ಮಗಳನ್ನ ಮದುವೆ ( ಮಾಡಿಕೊಳ್ಳುವುದಾಗಿ ಹೇಳಿ ಚೌಹಾಣ್ ಆಸ್ತಿ ಪಡೆದುಕೊಂಡಿದ್ದಾರೆ. ಸಹೋದರ ಮಾರುತಿ ಹಾಗೂ ಪತ್ನಿ ಹೆಸರಲ್ಲಿ ಜಮೀನು ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಏ.23 ರಂದು ಮಗಳ ಜೊತೆ ಚೌಹಾಣ್ ಮಗನ ನಿಶ್ಚಿತಾರ್ಥವನ್ನು ಸರಳವಾಗಿ ಮಾಡಿಕೊಂಡಿದ್ದರು. ಈಗ ಸೋಮವಾರ ಬೇರೆ ಯುವತಿ ಜೊತೆ ಮದುವೆ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸಿದ್ದಾರೆ. ತಮ್ಮ ಮಗಳ ಜೊತೆ ಮದುವೆ ಮಾಡಿಕೊಡಿ ಇಲ್ಲವಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮಾಧ್ಯಮಗಳ ಮುಂದೆ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಜಮೀನಿಗೆ ಹಣವನ್ನೂ ನೀಡಿಲ್ಲ, ಮದುವೆಯನ್ನು ಸಹ ಮಾಡಿಕೊಳ್ಳುತ್ತಿಲ್ಲ ಎಂದು ಗಂಗಾಧರ ರಾಥೋಡ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.








































































































































































































































































































































































































































































































































































































































































































































































































































































































































































































































































































































