July 29, 2026
#ಚಲನಚಿತ್ರ

ನಾವು ಬಂದು ನಿಂತ್ರೆ ಸಮಸ್ಯೆ ಪರಿಹಾರ ಆಗುತ್ತಾ?

ಕರ್ನಾಟಕ ಬಂದ್​ಗೆ ಸ್ಯಾಂಡಲ್​ವುಡ್ ಬೆಂಬಲ ನೀಡಿದೆ. ಇಂದು ಸಿನಿಮಾ ಕೆಲಸಗಳನ್ನು ಬಂದ್ ಮಾಡಲಾಗಿದೆ. ಸಿನಿಮಾ ಪ್ರದರ್ಶನ, ಶೂಟಿಂಗ್ ನಡೆಯುತ್ತಿಲ್ಲ. ಬೆಂಗಳೂರಿನ ಕರ್ನಾಟಕದ ಫಿಲ್ಮ್​ ಚೇಂಬರ್ ಸಮೀಪ ಇರುವ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಚಿತ್ರರಂಗ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಚಿತ್ರರಂಗದ ಹಲವು ಕಲಾವಿದರು ಈ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾರೆ. ಉಪೇಂದ್ರ, ಶಿವರಾಜ್​ಕುಮಾರ್, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ಉಮಾಶ್ರೀ  ಮೊದಲಾದವರು ಭಾಗಿ ಆಗಿದರು. ಈ ವೇಳೆ ಶಿವಣ್ಣ ಮಾತನಾಡಿದ್ದಾರೆ.

‘ಕಾವೇರಿ ಸಮಸ್ಯೆ ಮೊದಲಿನಿಂದಲೂ ಇದೆ. ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕಾವೇರಿ ಎಷ್ಟು ನೋವು ಅನುಭವಿಸಿರಬಹುದು. ತಾಯಿ ಪವರ್ ಅಂಥದ್ದು. ಎಲ್ಲಾ ನೋವನ್ನು ತೆಗೆದುಕೊಳ್ಳುತ್ತಾಳೆ. ಕಲಾವಿದರು ಬರಲ್ಲ ಎನ್ನುವ ಆರೋಪ ಮಾಡುತ್ತೀರಿ. ಕಲಾವಿದರು ಬಂದು ಏನು ಮಾಡಬೇಕು ಹೇಳಿ. ನಾವು ಬಂದು ನಿಂತ್ರೆ ಸಮಸ್ಯೆ ಪರಿಹಾರ ಆಗುತ್ತದಾ? ನಿಮ್ಮ ತರಹ ನಾವು ಮನುಷ್ಯರೇ. ಸ್ಟಾರ್​ ಗಿರಿ ಕೊಟ್ಟಿದ್ದು ನೀವೆ. ಅದನ್ನು ಕಿತ್ಕೋಳಿ, ನಮಗೆ ಬೇಡ. ನಾವು ಬಂದು ಮಾತನಾಡಿದ್ರೆ ಸಮಸ್ಯೆ ಪರಿಹಾರ ಆಗಲ್ಲ’ ಎಂದಿದ್ದಾರೆ ಶಿವಣ್ಣ.

‘ಸರ್ಕಾರಗಳು ಕುಂತು ಮಾತನಾಡಬೇಕು. ಒಂದು ಹೊಂದಾಣಿಕೆ​ಗೆ ಬರಬೇಕು. ರೈತರು ಎಲ್ಲ ಕಡೆಗಳಲ್ಲೂ ಒಂದೇ. ಎಲ್ಲರೂ ಕುಂತು ಮಾತನಾಡಿದ್ರೆ ಪರಿಹಾರ ಸಿಗುತ್ತದೆ. ದಾರಿ ಮೇಲೆ ಹೋಗುವ ಬಸ್​ಗೆ ಕಲ್ಲು ಹೊಡೆದರೆ ಅದು ಪ್ರತಿಭಟನೆ ಆಗುತ್ತದೆಯೇ? ಪರಭಾಷೆಯ ಹೀರೋನ ಸುದ್ದಿಗೋಷ್ಠಿ ನಿಲ್ಲಿಸಲಾಯಿತು. ಅದು ತಪ್ಪಲ್ವಾ? ಸುಮ್ಮನೆ ಕೂತು ಹೋರಾಟ ಮಾಡಿದ್ರೆ ಪರಿಹಾರ ಸಿಗಲ್ಲ. ಪರಿಸ್ಥಿತಿ ನೋಡಿ ಅಡ್ವಾಂಟೇಜ್ ತೆಗೆದುಕೊಳ್ಳಬಾರದು. ಇದು ಹೋರಾಟಕ್ಕೆ ಮರ್ಯಾದೆ ಅಲ್ಲ. ಬೇರೆಯವರಿಗೆ ನೋವು ಕೊಡುವ ಕೆಲಸ ಮಾಡಬಹುದು’ ಎಂದು ಕೋರಿದ್ದಾರೆ ಶಿವರಾಜ್​ಕುಮಾರ್.

‘ಸಿದ್ದಾರ್ಥ್ ಅವರೇ ನಿಮಗೆ ನಾನು ಕ್ಷಮೆ ಕೇಳುತ್ತೇನೆ. ಎಲ್ಲೇ ಹೋದರೂ ಕರ್ನಾಟಕದವರಿಗೆ ದೊಡ್ಡ ಮರ್ಯಾದೆ ಇದೆ. ಅದನ್ನು ಕಾಪಾಡಿಕೊಂಡು ಹೋಗಬೇಕಿದೆ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ನಾನು ಯಾವಾಗಲೂ ಹೃದಯದಿಂದ ಮಾತಾಡ್ತೀನಿ. ಎಲ್ಲರ ಜೊತೆಗೂ ಚೆನ್ನಾಗಿರಬೇಕು. ಅವರು ಬಂದಿಲ್ಲ, ಇವರು ಬಂದಿಲ್ಲ ಎನ್ನಬೇಡಿ’ ಎಂದಿದ್ದಾರೆ ಶಿವರಾಜ್​ಕುಮಾರ್.

ಧ್ರುವ ಕೂಡ ಮಾತನಾಡಿದ್ದು, ‘ಕನ್ನಡ ಚಿತ್ರರಂಗ ಒಂದಾಗಿಯೇ ಇದೆ. ಕೆಟ್ಟ ಸಂಚಿಂದ ಒಡೆಯಬೇಡಿ. ನಾವು ಯಾವಾಗಲೂ ರೈತರ ಪರ. ಎರಡೂ ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ. ರೈತರಿಗೆ ಒಳ್ಳೆಯದಾಗಲಿ’ ಎಂದರು.

Leave a comment

Your email address will not be published. Required fields are marked *