ರಾಜ್ಯದ ರೈತರ ಕೈಗೆ ಇನ್ನೂ ಸೇರದ ಬೆಳೆ ಪರಿಹಾರ
ಬೆಂಗಳೂರು:
ಬರಗಾಲದಿಂದ ಬೆಳೆ ನಷ್ಟವಾಗಿರುವ ಪ್ರತಿ ರೈತರಿಗೆ ಸರ್ಕಾರ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ 2,000ರೂ. ಬರ ಪರಿಹಾರವನ್ನು ನೀಡಲಿದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ರಾಜ್ಯದ ರೈತರ ಕೈಗೆ ಇನ್ನೂ ಕೂಡ ಬೆಳೆ ಪರಿಹಾರದ ಹಣ ಕೈಗೆ ಸಿಕ್ಕಿಲ್ಲ. ಕೇವಲ ಘೋಷಣೆಗೆ ಮಾತ್ರ ಸೀಮಿತವಾದಂತಿದೆ. ಹೀಗಾಗಿ ರಾಜ್ಯದ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬರ ಘೋಷಿತ 223 ತಾಲೂಕುಗಳ ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ 2 ಸಾವಿರ ರೂ.ವರೆಗೆ ಬೆಳೆ ನಷ್ಟ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಅಷ್ಟೇ ಅಲ್ಲದೆ ವಾರದ ಅಂತ್ಯದೊಳಗೆ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ 2000 ರೂ. ಬರ ಪರಿಹಾರ ಬೀಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೂಡ ತಿಳಿಸಿದ್ದರು. ಆದರೆ ಈಗ ಘೋಷಣೆ ಮಾಡಿ ತಿಂಗಳುಗಳು ಕಳೆದರೂ ಪರಿಹಾರದ ಬಿಡಿಗಾಸು ಹಣ ಕೂಡ ರೈತರ ಕೈ ಸೇರಿಲ್ಲ.
ಕೇಂದ್ರ ಬಿಡುಗಡೆಗೂ ಮುನ್ನ ಮೊದಲ ಕಂತಿನಲ್ಲಿ 2 ಸಾವಿರ ರೂ. ಬೆಳೆ ಪರಿಹಾರ ಮಾಡುವುದಾಗಿ ಬೆಳಗಾವಿ ಅಧಿವೇಶ ಪ್ರಾರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಕೊಟ್ಟಿದ್ದ ಮಾತನ್ನು ತಪ್ಪಿದ್ದಾರೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ಇದೆಲ್ಲದರ ಜೊತೆಗೆ ಮತ್ತೊಂದೆಡೆ ನ. ೩೦ರಂದು ರೈತರಿಗೆ ಬೆಳೆ ಪರಿಹಾರವಾಗಿ 2 ಸಾವಿರ ರೂ. ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದರು. ಈಗಾಗಲೇ ರಾಜ್ಯ ಸರ್ಕಾರ ಬರಗಾಲ ಕುರಿತು ಕೇಂದ್ರದ ಬಳಿ 18 ಸಾವಿರ ಕೋಟಿ ರೂ. ಪರಿಹಾರ ಕೇಳಿದೆ. ಸದ್ಯ ಕೇಂದ್ರದಿAದ ಈವರೆಗೆ ರಾಜ್ಯಕ್ಕೆ ಯಾವುದೇ ಪರಿಹಾರ ಹಣ ಬಿಡುಗಡೆ ಆಗಿಲ್ಲ. ಕೇಂದ್ರ ಹಣ ಬಿಡುಗಡೆ ಮುನ್ನವೇ ರಾಜ್ಯದ ರೈತರಿಗೆ ಬೆಳೆ ಪರಿಹಾರ ಹಣ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ರೈತರಿಗೆ ಬಿಡಿಗಾಸು ಕೂಡ ಕೈಗೆ ಸೇರಿಲ್ಲ.
ಇನ್ನು ರಾಜ್ಯದ 236 ತಾಲೂಕುಗಳ ಪೈಕಿ ಎನ್ಡಿಆರ್ಎಫ್ ಮಾರ್ಗಸೂಚಿಯ ಪ್ರಕಾರ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 48.19 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ನಷ್ಟ ಆಗಿದೆ. 18, 171.44 ಕೋಟಿ ರೂ. ಆರ್ಥಿಕ ನೆರವಿಗಾಗಿ ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.













































































































































































































































































































































































































































































































































































































































































































































































































































































































































































































































































































































