July 29, 2026
#ಬೆಂಗಳೂರು

ರಾಮ ಮಂದಿರ ಕಟ್ಟಿದ್ದಕ್ಕೆ ಸೇಡು, ಮುಸ್ಲಿಮರ ಓಲೈಕೆಗಾಗಿ ಕರಸೇವಕರ ಬಂಧನ

ಬೆಂಗಳೂರು:
ಮುಸ್ಲಿಮರ ಓಲೈಕೆಗಾಗಿ ೩೧ ವರ್ಷದ ಹಿಂದಿನ ಹುಬ್ಬಳ್ಳಿ ಪ್ರಕರಣವನ್ನು ತೆರೆಯಲಾಗಿದೆ ಎಂದು ಚಿಂತಕ ಚರ್ಕವರ್ತಿ ಸೂಲಿಬೆಲೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದ ಜೊತೆ ಮಾತಾನಾಡಿದ ಅವರು, ಘಟನೆ ನಡೆದ ಬಳಿಕ ಹಲವು ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆಗ ಸುಮ್ಮನ್ನಿದ್ದವರು ಈಗ ಏಕಾಏಕಿ ಬಂಧನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ನಡೆದಾಗ ಅಮಾಯಕರನ್ನು ಬಿಡುಗಡೆ ಮಾಡಿ ಎಂದು ಪತ್ರ ಬರೆಯುತ್ತಾರೆ. ಈ ಗಲಭೆ ನಿಮ್ಮ ಅವಧಿಯಲ್ಲಿ ಇದ್ದಾಗಲೇ ನಡೆದಿತ್ತು. ಹುಬ್ಬಳ್ಳಿ ಪ್ರಕರಣ ನಡೆದಾಗ ಭಾಗಿಯಾದ ಮಂದಿ ತರುಣರಾಗಿದ್ದರು. ಈಗ ಅವರಿಗೆ ೭೦ ವರ್ಷ ಆಗಿರಬಹುದು. ಈ ಸಮಯದಲ್ಲಿ ಬಂಧನ ಅಗತ್ಯವೇ ಎಂದು ಕೇಳಿದರು.
ಕರ ಸೇವಕರನ್ನು ಭಯಪಡಿಸಲು ಸರ್ಕಾರ ಈಗ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಯೋಗಿ ಅದಿತ್ಯನಾಥ್ ಸರ್ಕಾರ ಲಕ್ಷಕ್ಕೂ ಹೆಚ್ಚು ದಾಖಲೆಗಳನ್ನು ಭಾಷಾಂತರ ಮಾಡಿತ್ತು. ಅವರಿಗೆ ಹೇಗೆ ಶ್ರೇಯಸ್ಸು ಕೊಡಲಾಗುತ್ತಿದೆಯೇ ಅದೇ ರೀತಿ ಕರಸೇವಕರಿಗೆ ಶ್ರೇಯಸ್ಸು ಸಲ್ಲಬೇಕು. ಅಂದು ಅವರು ಹೋರಾಟ ಮಾಡದೇ ಇದ್ದರೆ ಇಂದು ಭವ್ಯವಾದ ರಾಮಮಂದಿರ ತಲೆ ಎತ್ತುತ್ತಿರಲಿಲ್ಲ. ಈ ಕಾರಣಕ್ಕೆ ಯಾರೆಲ್ಲ ಕರಸೇವೆಯಲ್ಲಿ ಭಾಗಿಯಾಗಿದ್ದಾರೋ ಅವರನ್ನು ಪ್ರತಿ ಗ್ರಾಮ ಗ್ರಾಮದಲ್ಲಿ ಸನ್ಮಾನ ಮಾಡಬೇಕು. ಎಷ್ಟು ಜನರನ್ನು ಬಂಧಿಸುತ್ತಾರೋ ನೋಡೋ ಬಿಡೋಣ ಎಂದು ಸವಾಲು ಹಾಕಿದರು.
ರಾಮ ಮಂದಿರ ಕಟ್ಟುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಹೇಳಿತ್ತು. ಆದರೆ ರಾಮಮಂದಿರ ನಿರ್ಮಾಣವಾಗಬಾರದು ಎಂದು ಕಾಂಗ್ರೆಸ್ ನಾಯಕರಾಗಿದ್ದ ಕಪಿಲ್ ಸಿಬಲ್ ನೇತೃತ್ವದಲ್ಲಿ ವಕೀಲರ ತಂಡವೇ ರಚನೆಯಾಗಿತ್ತು. ರಾಮಮಂದಿರ ಕಟ್ಟಬಾರದು ಎಂದು ಕೆಲಸ ಮಾಡಿದ್ದು ಕಾಂಗ್ರೆಸ್. ಈಗ ರಾಮಮಂದಿರ ನಿರ್ಮಾಣವಾಗಿ ಲೋಕಾರ್ಪಣೆ ಆಗುತ್ತಿರುವುದನ್ನು ಸಹಿಸಲು ಕಾಂಗ್ರೆಸ್‌ಗೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ದೇಶಕ್ಕೆ ನಾವು ಒಂದು ಮುಸ್ಲಿಂ ಪಕ್ಷ ಎಂದು ತೋರಿಸಲು ಹೊರಟಿದೆ. ಪಂಚ ರಾಜ್ಯ ಸೋತ ನಂತರ ಇಡೀ ದೆಶದಲ್ಲಿ ಸೋಲುವ ಭೀತಿ ಕಾಂಗ್ರೆಸ್‌ಗಿದೆ. ನರಿಗಳಿಗೆ ಸಾಯುವ ಸಮಯ ಬಂದಾಗ ಸಿಟಿ ಕಡೆ ಹೋಗುತ್ತವೆ ಎಂಬ ಹಿಂದಿ ಗಾದೆಯಂತಾಗಿದೆ ಕಾಂಗ್ರೆಸ್ ಸ್ಥಿತಿ. ಗ್ಯಾರಂಟಿ ನಂಬಿ ಮತ ಹಾಕಿದ ಜನ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.

Leave a comment

Your email address will not be published. Required fields are marked *