ಬಾಗಿಲಿಲ್ಲದ ದೇವಾಲಯಕ್ಕೆ ನುಗ್ಗಿ ಕಾಣಿಕೆ ಡಬ್ಬಿ, 100 ಘಂಟೆಗಳನ್ನು ದೋಚಿದ ಕಳ್ಳರು
ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧವಾದ, ಬಾಗಿಲು ಇಲ್ಲದ ದೇವಾಲಯವೆಂದೇ ಪ್ರಸಿದ್ಧಿ ಪಡೆದಿರುವ ತೋಪನಯ್ಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.
ಭಕ್ತರಹಳ್ಳಿ ಸಮೀಪದ ತೋಪನಯ್ಯ ಸ್ವಾಮಿ ದೇವಾಲಯ ಬಾಗಿಲು ಇಲ್ಲದ ದೇವಾಲಯವಾಗಿದ್ದು, ಪುರಾತನ ದೇವಾಲಯವಾಗಿದೆ. ಭಾನುವಾರ ರಾತ್ರಿ ಈ ದೇವಾಲಯಕ್ಕೆ ನುಗ್ಗಿರುವ ಕಳ್ಳರು, ಸುಮಾರು 30 ಸಾವಿರ ರೂ. ಹುಂಡಿಯಲ್ಲಿದ್ದ ಕಾಣಿಕೆ ಹಣವನ್ನು ದೋಚಿದ್ದಾರೆ. ಅಲ್ಲದೇ ದೇವಾಲಯಕ್ಕೆ ಅಳವಡಿಸಿದ್ದ 100ಕ್ಕೂ ಹೆಚ್ಚು ಘಂಟೆಗಳನ್ನು ಕದ್ದೊಯ್ದಿದ್ದಾರೆ.
ಇಷ್ಟೆಲ್ಲಾ ಕಳ್ಳತನ ಮಾಡಿದರೂ ಖದೀಮರು ಹುಂಡಿ ಪಕ್ಕದಲ್ಲಿಯೇ ಇದ್ದ ಬೆಳ್ಳಿಯ ಬೃಹತ್ ನಾಗಾಭರಣವನ್ನು ಮುಟ್ಟದೆ ಇರುವುದು ಭಕ್ತರ ಆಶ್ಚರ್ಯಕ್ಕೆ ಕಾರಣವಾಗಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













































































































































































































































































































































































































































































































































































































































































































































































































































































































































































































































































































































