July 29, 2026
#ಜಿಲ್ಲೆ

ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯನೇ ಸಿಎಂ

ದಾವಣಗೆರೆ: ಸಿಎಂ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯನೇ ಸಿಎಂ ಎಂದು ದಾವಣಗೆರೆಯಲ್ಲಿ ವಸತಿ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾರೇ ಏನು ಅಂದರೂ ಸಿದ್ದರಾಮಯ್ಯ ಪರ. ಸಿಎಂ ಸ್ಥಾನದ ಅವಧಿ ಬಗ್ಗೆ ನಿರ್ಧಾರ ಮಾಡೋದು ಹೈಕಮಾಂಡ್. ಹೈಕಮಾಂಡ್ ಹೇಳಿದ್ರೆ ಸಿದ್ದುನೇ 5 ವರ್ಷ ಸಿಎಂ ಆಗಿರುತ್ತಾರೆ ಎಂದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿಯಿಂದ ಆಪರೇಷನ್ ಕಮಲ ಅಸಾಧ್ಯ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಗಲು ಕನಸು ಕಾಣ್ತಿದ್ದಾರೆ. 56 ಜನ ಎಂಎಲ್‌ಎಗಳನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡೋದು ಸಾಧ್ಯನಾ? ರಮೇಶ್ ಜಾರಕಿಹೊಳಿ ಅವರನ್ನೇ ಕೇಳಿ ಆಪರೇಷನ್ ಎಷ್ಟು ಕಷ್ಟ ಅಂತ. ಸಮ್ಮಿಶ್ರ ಸರ್ಕಾರದಲ್ಲಿ 17 ಜನರನ್ನು ಕರೆದುಕೊಂಡು ಹೋಗಲು ಎಷ್ಟು ಎಷ್ಟು ಸರ್ಕಸ್ ಮಾಡಿದ್ದಾರೆ. ರಮೇಶ್ ಹೈಕಮಾಂಡ್ ಬಳಿ ಬೇಳೆ ಬೇಯಿಸಿಕೊಳ್ಳಲು ಹೀಗೆ ಮಾತಾಡ್ತಿದ್ದಾರೆ. ರಮೇಶ್ ಬಿಜೆಪಿಯಲ್ಲಿ ಇರೋ ಶಾಸಕರನ್ನು ಉಳಿಸಿಕೊಳ್ಳಲಿ. ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲು ಒಂದು ಕಾಲಿನಲ್ಲಿ ನಿಂತಿದ್ದಾರೆ. ಮೊದಲು ಅವರ ಬಗ್ಗೆ ಗಮನ ಹರಿಸಲಿ ಎಂದರು. 

ಇನ್ನು ಡಾ. ಪರಮೇಶ್ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಊಟಕ್ಕೆ ಹೋದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನನ್ನು ಕೂಡಾ ಕರೆದಿದ್ದರು. ಆದ್ರೆ ಹೋಗುವುದಕ್ಕೆ ಆಗಿಲ್ಲ. ಉಪಮುಖ್ಯಮಂತ್ರಿಯವರನ್ನು ಕರೆದಿರುತ್ತಾರೆ. ಸತೀಶ್ ಜಾರಕಿಹೊಳಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದ ಜಮೀರ್ ಅಹಮದ್ ಮೂಡಿದ ಗೊಂದಲಕ್ಕೆ ತೆರೆ ಎಳೆದರು. 

Leave a comment

Your email address will not be published. Required fields are marked *