May 30, 2026
#Uncategorized

ಬಿಜೆಪಿಯಲ್ಲಿ ಗೆದ್ದಿದ್ದೇನೆ, ಹಾಗಂತ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಮಾಡಬಾರದಾ? 

ರಾಮನಗರ: ಹಿಂದೆ ಮೈಸೂರು ಉಸ್ತುವಾರಿ ಸಚಿವನಾಗಿದ್ದ ವೇಳೆ ಕೇವಲ ಮೂರು ಕ್ಷೇತ್ರದಲ್ಲಷ್ಟೇ ಬಿಜೆಪಿ ಇತ್ತು. ಹೀಗಿದ್ದರೂ, ಉಳಿದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೆ. ಅದೇ ರೀತಿ ಈಗಲೂ ನಡೆಯುತ್ತಿದೆ. ಬಿಜೆಪಿಯಲ್ಲಿ ನಾನು ಗೆದ್ದಿದ್ದೇನೆ. ಹಾಗಂತ ಕಾಂಗ್ರೆಸ್  ಸರ್ಕಾರದ ಕಾರ್ಯಕ್ರಮ ಮಾಡಬಾರದಾ ಎಂದು ಶಾಸಕ ಎಸ್‌ಟಿ ಸೋಮಶೇಖರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

https://imasdk.googleapis.com/js/core/bridge3.603.0_en.html#goog_504558952

ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರು ವಿಚಾರವಾಗಿ ಕುಂಬಳಗೋಡು ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಂಬಳಗೋಡು ಪೊಲೀಸ್ ಠಾಣೆ ಉದ್ಘಾಟನೆಗೆ ಮೊದಲೇ ಪ್ಲ್ಯಾನ್ ಆಗಿತ್ತು. ಹೀಗಾಗಿ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಮೊದಲು ನ.16ರಂದು ಪೊಲೀಸ್ ಠಾಣೆ ಉದ್ಘಾಟನೆ ಎಂದಿದ್ದರು. ಬಳಿಕ ನ.15ಕ್ಕೆ ಕಾರ್ಯಕ್ರಮ ಎಂದು ಗೃಹಸಚಿವರು ತಿಳಿಸಿದರು. ಹೀಗಾಗಿ ವಿಜಯೇಂದ್ರ ಅವರ ಕಾರ್ಯಕ್ರಮಕ್ಕೆ ಹೋಗಿಲ್ಲ. ನಮ್ಮ ಕ್ಷೇತ್ರಕ್ಕೆ ಇಂದು ಗೃಹ ಸಚಿವರು ಬರುತ್ತಿದ್ದಾರೆ, ಹೀಗಾಗಿ ಇಲ್ಲಿದ್ದೇನೆ. ಸಚಿವರ ಕಾರ್ಯಕ್ರಮ ಮುಗಿದ ಬಳಿಕ ನಾನು ಪಕ್ಷದ ಕಾರ್ಯಕ್ರಮಕ್ಕೆ ಹೋಗುತ್ತೆನೆ ಎಂದು ಸ್ಪಷ್ಟನೆ ನೀಡಿದರು. 

ನಾನು ಬಿಜೆಪಿಯಿಂದ ದೂರ ಉಳಿಯುತ್ತಿಲ್ಲ. ನನ್ನ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಆಯ್ಕೆ ಸರಿಯಾಗಿದೆ. ಇಂದಿನ ಪರಿಸ್ಥಿತಿಗೆ ಅವರ ಆಯ್ಕೆ ನೂರಕ್ಕೆ ನೂರರಷ್ಟು ಸರಿ ಇದೆ. ಈ ಹಿಂದೆ ವಿಜಯೇಂದ್ರ ಅವರು ರಾಜ್ಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಅನುಭವ ಇದೆ. ಎಲ್ಲಾ ಜಿಲ್ಲೆಯ ನಾಯಕರ ಪರಿಚಯ ಅವರಿಗೆ ಇದೆ. ಹೀಗಾಗಿ ಮುಂದಿನ ಚುನಾವಣೆಗೆ ಒಳ್ಳೆಯ ಬೆಳವಣಿಗೆ ಎಂದರು. 

ವಿಜಯೇಂದ್ರ ಆಯ್ಕೆ ಕುಟುಂಬ ರಾಜಕಾರಣ ಎಂಬ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಕುಟುಂಬ ರಾಜಕೀಯ ಅಲ್ಲ. ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲಲ್ಲ ಎಂದ ಮೇಲೆ ಅವರ ಮಗನಿಗೆ ಅಧಿಕಾರ ನೀಡಿದ್ದಾರೆ. ಬಿ.ವೈ.ರಾಘವೇಂದ್ರ ಹಿಂದೆ ಲೋಕಸಭಾ ಸದಸ್ಯರಾಗಿದ್ದರು. ಈಗ ವಿಜಯೇಂದ್ರ ಎಂಎಲ್‌ಎ ಆಗಿದ್ದಾರೆ ಅಷ್ಟೇ ಎಂದು ಹೇಳಿದರು. ಇನ್ನು ಬಿಜೆಪಿಯಲ್ಲಿ ಎಸ್.ಟಿ.ಸೋಮಶೇಖರ್ ಕಡೆಗಣನೆ ವಿಚಾರವಾಗಿ ಮಾತನಾಡಿದ ಅವರು, ನನ್ನನ್ನು ಯಾರು ಬೇಕಿದ್ದರೂ ಕಡೆಗಣಿಸಲಿ, ಬಿಡಲಿ. ಕ್ಷೇತ್ರದ ಜನ ನನ್ನನ್ನು ಕಡೆಗಣಿಸಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ 40 ಮಂದಿ ಮಹಿಳೆಯರ ಮೂಲಕ ಗ್ಯಾರಂಟಿ ತಲುಪುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ. ಇದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು ಎಂಬ ದೃಷ್ಟಿಯಷ್ಟೆ ನನ್ನದು ಎಂದು ಕಿಡಿಕಾರಿದರು. 

ಎಸ್.ಎಂ.ಕೃಷ್ಣ ಅವರು ಬಿಜೆಪಿ ಸೇರಿದ್ದರು. ಅವರಿಗೆ ನೀಡಿದ್ದ ಆಶ್ವಾಸನೆಗಳನ್ನು ಬಿಜೆಪಿ ಈಡೇರಿಸಿಲ್ಲ. ಹಿಂದೆ ಸಚಿವರಾಗಿದ್ದ ಶಂಕರ್, ಬಿ.ಸಿ.ನಾಗೇಶ್ ಸೇರಿದಂತೆ ಅನೇಕರಿಗೆ ಯಾವ ಸೌಲಭ್ಯ ನೀಡಿಲ್ಲ. ಮೊದಲು ಜಾಮೂನು ನೀಡಿ ಬಳಿಕ ವಿಷ ನೀಡುತ್ತಾರೆ ಎಂಬ ಹೇಳಿಕೆ ನನ್ನೊಂದಿಗೆ ಬಿಜೆಪಿ ಸೇರಿದ್ದ 17 ಮಂದಿಗೆ ಸೇರಿಸಿ ಹೇಳಿದ್ದು. ಈ ಹೇಳಿಕೆ ವೈಯಕ್ತಿಕವಾಗಿರಲಿಲ್ಲ. ನನಗೆ ಮಂತ್ರಿ ಸ್ಥಾನ ನೀಡಿದ್ರು, ಆದರೆ ಏಳೆಂಟು ಜನರಿಗೆ ಸ್ಥಾನಮಾನ ಸಿಗಲಿಲ್ಲ ಎಂದರು. 

ಎಂಎಲ್‌ಸಿ ಹೆಚ್.ವಿಶ್ವನಾಥ್ ಅವರು ತಮ್ಮ ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರ ಉರುಳುವಾಗ ಕೆಲ ಶಾಸಕರು ಹಣ ಪಡೆದ ಬಗ್ಗೆ ಉಲ್ಲೇಖ ಮಾಡುವುದಾಗಿ ಹೇಳಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬುಕ್‌ನಲ್ಲಿ ಯಾಕೆ? ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಕುಳಿತುಕೊಳ್ಳಲಿ. ಅಲ್ಲೇ ಬುಕ್ ಬರೆದು, ಓದಲಿ. ಅವರು ಚಾಮುಂಡಿ ಬೆಟ್ಟಕ್ಕೆ ಹೆಚ್ಚಾಗಿ ಹೋಗುತ್ತಾರಲ್ಲ. ಅಲ್ಲೇ ಕುಳಿತು ಬುಕ್ ಓದಲಿ. ಅವರಿಗೂ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಅಲ್ಲವೇ ಎಂದು ಲೇವಡಿ ಮಾಡಿದರು. 

Leave a comment

Your email address will not be published. Required fields are marked *