September 13, 2026
#ರಾಷ್ಟ್ರೀಯ

ಶ್ರೀರಾಮ ಮಾಂಸಾಹಾರಿಯಾಗಿದ್ದ.. ಬೇಟೆಯಾಡಿ ತಿನ್ನುವ ರಾಮ ನಮ್ಮವ: ಎನ್‌ಸಿಪಿ ನಾಯಕ ವಿವಾದಾತ್ಮಕ ಹೇಳಿಕೆ

ನವದೆಹಲಿ: ಭಗವಾನ್‌ ರಾಮ ‘ಬಹುಜನ’ರಿಗೆ ಸೇರಿದವನು. ರಾಮ ಮಾಂಸಾಹಾರಿಯಾಗಿದ್ದ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವ್ಹಾದ್ ಅವರು ಭಗವಾನ್ ರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜನವರಿ 22 ರಂದು ಅಯೋಧ್ಯೆಯ ಪವಿತ್ರೀಕರಣ ಸಮಾರಂಭದ ದಿನದಂದು ಒಂದು ದಿನದ ಮದ್ಯ ಮತ್ತು ಮಾಂಸವನ್ನು ನಿಷೇಧಿಸುವಂತೆ ಬಿಜೆಪಿ ಶಾಸಕ ರಾಮ್ ಕದಮ್ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಜಿತೇಂದ್ರ ಈ ಹೇಳಿಕೆ ನೀಡಿದ್ದಾರೆ. 

ರಾಮ ನಮ್ಮವನು. ರಾಮ ಬಹುಜನರಿಗೆ ಸೇರಿದವನು. ಬೇಟೆಯಾಡಿ ತಿನ್ನುವ ರಾಮ ನಮ್ಮವನು, ನಾವು ಬಹುಜನರಿಗೆ ಸೇರಿದವರು. ನೀವು ನಮ್ಮೆಲ್ಲರನ್ನು ಸಸ್ಯಾಹಾರಿಯನ್ನಾಗಿ ಮಾಡಲು ಹೋದಾಗ, ನಾವು ರಾಮನ ಆದರ್ಶಗಳನ್ನು ಅನುಸರಿಸುತ್ತೇವೆ. ಇಂದು ನಾವು ಕುರಿ ಮಾಂಸವನ್ನು ತಿನ್ನುತ್ತೇವೆ. ಇದು ರಾಮನ ಆದರ್ಶ. ರಾಮ ಸಸ್ಯಾಹಾರಿಯಾಗಿರಲಿಲ್ಲ, ಮಾಂಸಾಹಾರಿಯಾಗಿದ್ದ ಎಂದು ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಚರ್ಚೆಗೆ ಚಾಲನೆ ನೀಡಿದ ಅವ್ಹಾದ್, 14 ವರ್ಷಗಳಿಂದ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರವನ್ನು ಎಲ್ಲಿ ಹುಡುಕಲು ಹೋಗುತ್ತಾನೆ? ನನ್ನ ಪ್ರಶ್ನೆ ಸರಿಯೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ. 

ಯಾರು ಏನೇ ಹೇಳಲಿ, ಗಾಂಧಿ ಮತ್ತು ನೆಹರೂ ಅವರಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂಬುದು ಸತ್ಯ. ಗಾಂಧೀಜಿ 1947 ರಲ್ಲಿ ಹತ್ಯೆಯಾಗಲಿಲ್ಲ. ಆದರೆ ಅವರ ಮೇಲೆ ಮೊದಲ ದಾಳಿ ನಡೆದದ್ದು, 1935 ರಲ್ಲಿ. ಎರಡನೆಯದು ದಾಳಿ 1938 ರಲ್ಲಿ ನಡೆಯಿತು. ಮೂರನೇ ದಾಳಿ 1942 ರಲ್ಲಿ ನಡೆಯಿತು ಎಂದು ತಿಳಿಸಿದ್ದಾರೆ.

ಅಷ್ಟಕ್ಕೂ ಅವರ ಮೇಲೆ ಯಾಕೆ ಇಷ್ಟು ಬಾರಿ ದಾಳಿ ಮಾಡಿದರು? ಗಾಂಧೀಜಿ ವ್ಯಾಪಾರಿ ಮತ್ತು ಒಬಿಸಿ ಆಗಿದ್ದರಿಂದ ಅವರ ಮೇಲೆ ದಾಳಿ ನಡೆಸಲಾಯಿತು. ಅಂತಹ ದೊಡ್ಡ ಸ್ವಾತಂತ್ರ್ಯ ಚಳವಳಿಯ ನಾಯಕ ಒಬಿಸಿ ಆಗಿರುವುದು ಅವರಿಗೆ (ಆರ್‌ಎಸ್‌ಎಸ್) ಸಹಿಸಲಾಗಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

ಜನರಲ್ಲಿ ಐತಿಹಾಸಿಕ ಘಟನೆಗಳ ಅರಿವಿನ ಕೊರತೆಯಿದೆ. ಗಾಂಧೀಜಿಯವರ ಹತ್ಯೆಯ ಹಿಂದಿನ ನಿಜವಾದ ಕಾರಣ ಜಾತೀಯತೆ. ನೀವು ಈ ಇತಿಹಾಸವನ್ನು ಓದುವುದಿಲ್ಲ. ಅದನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

Leave a comment

Your email address will not be published. Required fields are marked *