July 29, 2026
#ಜಿಲ್ಲೆ

ಸಹಕಾರಿ ಬ್ಯಾಂಕ್ ಚುನಾವಣೆಗೆ ಹೈಕೋರ್ಟ್ ಆದೇಶಜಿಟಿಡಿ, ಸಿಎಂ ವಾರ್‌ಗೆ ಅಖಾಡ ಫಿಕ್ಸ್

ಮೈಸೂರು:
ಚಾಮರಾಜನಗರ ಸಹಕಾರಿ ಬ್ಯಾಂಕ್ ಚುನಾವಣೆಯನ್ನು ಎಂಟು ವಾರಗಳಲ್ಲಿ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ಜಿ.ಟಿ ದೇವೆಗೌಡ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಮೆಗಾ ಫೈಟ್‌ಗೆ ಮೈಸೂರಿನಲ್ಲಿ ಅಖಾಡ ಫಿಕ್ಸ್ ಆಗಿದೆ.
ನ್ಯಾಯಾಲಯದ ಆದೇಶದಿಂದ, ಸಹಕಾರಿ ಬ್ಯಾಂಕ್ ಚುನಾವಣೆ ಹೆಸರಿನಲ್ಲಿ ಇಬ್ಬರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ತೆರೆ ಬೀಳುವ ಸಮಯ ಬಂದಿದೆ. ಸಹಕಾರ ಕ್ಷೇತ್ರದಲ್ಲಿ ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಲು ತೆರೆಮರೆಯಲ್ಲೇ ಸಿಎಂ ಪ್ರಯತ್ನ ನಡೆಸುತ್ತಿದ್ದರು. ಅಲ್ಲದೇ ಸಿದ್ದರಾಮಯ್ಯ ತಮ್ಮ ಹಿಡಿತ ಬಿಗಿ ಮಾಡಿಕೊಳ್ಳಲು ಹಲವು ಕಾರ್ಯತಂತ್ರ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ನ್ಯಾಯಾಲಯದ ಆದೇಶದಿಂದ ಲೋಕಸಭಾ ಚುನಾವಣೆಗೂ ಮುನ್ನ ಇಬ್ಬರ ನಡುವಿನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.
ಕಳೆದ ನವೆಂಬರ್‌ನಲ್ಲಿ ಚುನಾವಣೆ ನಡೆಸಲು ಮೈಸೂರು ಜಿಲ್ಲಾಧಿಕಾರಿಗಳಿಂದ ಆದೇಶವಾಗಿತ್ತು, ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಕಾರಣ ಹೇಳಿ ಚುನಾವಣೆಯನ್ನು ದಿಢೀರ್ ರದ್ದು ಮಾಡಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಆದೇಶ ಮಾಡಿದ್ದರು. ಇದಾದ ಬಳಿಕ ಜಿ.ಟಿ.ಡಿ ಹಾಗೂ ಅವರ ಬೆಂಬಲಿಗರು ಚುನಾವಣೆ ನಡೆಸಲೇಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೋರ್ಟ್ ಎಂಟು ವಾರಗಳಲ್ಲಿ ಚುನಾವಣೆ ನಡೆಸಲು ಆದೇಶ ನೀಡಿದೆ. ಸದ್ಯ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾಗಿ ಜಿಟಿಡಿ ಪುತ್ರ ಶಾಸಕ ಜಿ.ಟಿ.ಹರೀಶ್ ಗೌಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

Leave a comment

Your email address will not be published. Required fields are marked *