September 13, 2026
#ರಾಷ್ಟ್ರೀಯ

ಸಂಸತ್ ದಾಳಿ: ಮೈಸೂರಿನ ಮನೋರಂಜನ್ ಸೇರಿಐವರಿಗೆ ಮಂಪರು ಪರೀಕ್ಷೆ

ನವದೆಹಲಿ:
ಸಂಸತ್ತಿನ ಒಳಗೆ ಹೊಗೆ ಬಾಂಬ್ ಸಿಡಿಸಿ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿರುವ ೬ ಆರೋಪಿಗಳ ಪೈಕಿ ಐವರಿಗೆ ಶುಕ್ರವಾರ ಸುಳ್ಳುಪತ್ತೆ ಪರೀಕ್ಷೆ ಮತ್ತು ಮಂಪರು ಪರೀಕ್ಷೆ ನಡೆಸಲಾಗಿದೆ.
ಮೈಸೂರಿನ ಡಿ. ಮನೋರಂಜನ್, ನಾಲ್ವರು ಆರೋಪಿಗಳಾದ ಸಾಗರ್ ಶರ್ಮಾ, ಅಮೋಲ್ ಶಿಂಧೆ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರಿಗೆ ಗುಜರಾತ್ ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮನೋರಂಜನ್ ಹಾಗೂ ಸಾಗರ್ ಅವರಿಗೆ ಹೆಚ್ಚುವರಿಯಾಗಿ ಟ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದೆ.
ಈ ಪ್ರಕರಣದ ಏಕೈಕ ಮಹಿಳಾ ಆರೋಪಿಯಾಗಿರುವ ನೀಲಂ ಮಂಪರು ಪರೀಕ್ಷೆಗೆ ತನ್ನ ಒಪ್ಪಿಗೆ ನೀಡದ್ದರಿಂದ ಐವರಿಗೆ ಮಾತ್ರ ಪರೀಕ್ಷೆ ನಡೆಸಲು ದೆಹಲಿ ನ್ಯಾಯಾಲಯ ಆದೇಶಿಸಿತ್ತು.
ಸಂಸತ್ ಮೇಲೆ ದಾಳಿ ನಡೆಸಲು ವರ್ಷದ ಹಿಂದೆಯೇ ಮಾಸ್ಟರ್ ಪ್ಲಾನ್ ನಡೆದಿತ್ತು. ಸರ್ಕಾರದ ವಿರುದ್ಧ ಏನಾದರೂ ದೊಡ್ಡದು ಮಾಡಿ ಎಲ್ಲರ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿಯೇ ಮನೋರಂಜನ್ ಯೋಜನೆ ರೂಪಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.
ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡಿ.13 ರಂದು ಸಾಗರ್ ಶರ್ಮಾ ಮತ್ತು ಮನೋರಂಜನ್ ಸಂಸತ್‌ನ ಒಳಗೆ ಹಳದಿ ಸ್ಮೋಕ್ ಬಾಂಬ್ ಸಿಡಿಸಿದರೆ ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಶಿಂಧೆ ಕೆಂಪು ಮತ್ತು ಹಳದಿ ಸ್ಮೋಕ್ ಬಾಂಬ್ ಸಿಡಿಸಿದ್ದರು. ಇನ್ನಿಬ್ಬರು ಆರೋಪಿಗಳಾದ ವಿಶಾಲ್ ಮತ್ತು ಲಲಿತ್ ಝಾ ಗುರ್ಗಾಂವ್ ಮೂಲದವರು. ಲಲಿತ್ ಝಾ ತಮ್ಮ ಮೊಬೈಲ್‌ನಲ್ಲಿ ಘಟನೆಯ ದೃಶ್ಯಾವಳಿಗಳನ್ನು ಸೆರೆಹಿಡಿದು ಮೊಬೈಲ್ ಜೊತೆಗೆ ಅಲ್ಲಿಂದ ಪರಾರಿಯಾಗಿದ್ದ. ಮನೋರಂಜನ್, ಇತರರು ಸಂಸತ್ತಿನ ಒಳಗೆ ಹಾಗೂ ಹೊರಗೆ ಹೊಗೆಬಾಂಬ್ ಸಿಡಿಸಿ, ನಿರುದ್ಯೋಗ ಸಮಸ್ಯೆ, ಸರ್ವಾಧಿಕಾರತ್ವಕ್ಕೆ ಬೇಸತ್ತು ಹೀಗೆ ಮಾಡಿದ್ದಾಗಿ ಹೇಳಿದ್ದರು.

Leave a comment

Your email address will not be published. Required fields are marked *