July 29, 2026
#ಜಿಲ್ಲೆ

ಹಿಂದೂಗಳು ದರ್ಬಲಗೊಂಡರೆ ಮತ್ತೊಂದು ಪಾಕ್ ಸೃಷ್ಟಿ

ಚಿಕ್ಕಮಗಳೂರು:
ಹಿಂದೂಗಳನ್ನು ದುರ್ಬಲಗೊಳಿಸುವುದು, ಹಿಂದೂಗಳನ್ನು ಒಡೆದಾಳುವ ನೀತಿ ಕಾಂಗ್ರೆಸ್‌ನದ್ದಾಗಿದೆ. ಇದು ಮತ್ತೊಂದು ಪಾಕಿಸ್ತಾನ ಹಾಗೂ ಆಫ್ಘಾನಿಸ್ಥಾನದ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ, ಒಂದು ಕಾಲದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಇವು ಅಖಂಡ ಭಾರತದ ಭಾಗವಾಗಿದ್ದವು. ಗಾಂಧಾರಿಯ ತವರು ಮನೆ ಆಫ್ಘಾನಿಸ್ತಾನವಾಗಿತ್ತು. ಅಲ್ಲಿ ನೂರಕ್ಕೆ ನೂರು ಜನ ಹಿಂದೂಗಳಿದ್ದರು. ಈಗ ಮತ್ತೆ ಭಾರತದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾದರೆ ಪಾಕಿಸ್ತಾನ ಆಗಲಿದೆ. ಹಿಂದೂಗಳು ಒಗ್ಗಟ್ಟಾಗಿದ್ದರೆ ಪಾಕಿಸ್ತಾನ ಎನ್ನುವ ವಿಚಾರವೇ ತಲೆ ಎತ್ತುವುದಿಲ್ಲ ಎಂದಿದ್ದಾರೆ.
ಭಾರತದಲ್ಲಿ ಹಿಂದೂಗಳು ಕಡಿಮೆ ಆದಾಗ ಅದು ಮೊಘಲ್‌ಸ್ಥಾನ, ಅಥವಾ ಪಾಕಿಸ್ತಾನ ಆಗುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿದ್ದರೆ ಭಾರತ ಹಾಗೂ ಸಂವಿಧಾನ ಉಳಿಯುತ್ತದೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಭಾರತ ಹಾಗೂ ಸಂವಿಧಾನ ಉಳಿಯುವುದಿಲ್ಲ. ಹಿಂದೂ ರಾಷ್ಟ್ರವಾದರೆ ಆಫ್ಘಾನಿಸ್ತಾನ ಆಗಲು ಜಾಗವೇ ಇರುವುದಿಲ್ಲ. ಕಾಂಗ್ರೆಸ್‌ನದ್ದು ಎಸ್‌ಡಿಪಿಐ ಹಾಗೂ ಪಿಎಫ್‌ಐ ಬೆಂಬಲಿಸುವ ನೀತಿಯಾಗಿದೆ. ನಿಮ್ಮ ಮನಸ್ಸಿನಿಂದ ತಾಲಿಬಾನ್ ಚಿಂತನೆ ತೆಗೆದು ಹಾಕಿ. ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.
ನಾನು ಪ್ರತಿಭಟನೆ ಮಾಡಿದ್ದಕ್ಕೆ ವಶಕ್ಕೆ ಪಡೆದಿದ್ದರು. ಈಗ ಪ್ರಕರಣ ಇಲ್ಲ ಎಂದು ಬಿಡುಗಡೆ ಮಾಡಿದ್ದಾರೆ. ಶ್ರೀಕಾಂತ್ ಪೂಜಾರಿ ಬಿಡುಗಡೆ ಆಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ಇಡೀ ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ದಾವಣಗೆರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು, ನಮ್ಮ ದೇಶ ಹಿಂದೂ ರಾಷ್ಟ್ರ ಆಗಬಾರದು. ಹಿಂದೂ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಇದನ್ನು ಅಂಬೇಡ್ಕರ್ ಅವರೇ ಹೇಳಿದ್ದಾರೆ. ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ತೊಂದರೆ ಎಂದು ಅವರು ಹೇಳಿದ್ದರು.

Leave a comment

Your email address will not be published. Required fields are marked *