May 30, 2026
#ಬೆಂಗಳೂರು

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 6 ಲಕ್ಷ ಮಂದಿಗೆ ಬಿಬಿಎಂಪಿ ಎಚ್ಚರಿಕೆ

ಬೆಂಗಳೂರು:
ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕೆಲವು ದಿನಗಳ ಹಿಂದೆ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಮತ್ತೆ 6 ಲಕ್ಷ ಮಂದಿಗೆ ಬಾಕಿ ತೆರಿಗೆ ಪಾವತಿಸುವಂತೆ ಸಂದೇಶ ಕಳುಹಿಸಿದೆ. ಸುಮಾರು 500 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ೬ ಲಕ್ಷ ಮಂದಿಗೆ ಸಂದೇಶ ಕಳುಹಿಸಲಾಗಿದೆ. ಆದಾಗ್ಯೂ ಅವರು ತೆರಿಗೆ ಬಾಕಿ ಪಾವತಿ ಮಾಡದಿದ್ದರೆ ಈ ಸಂದೇಶದಲ್ಲಿ ಉಲ್ಲೇಖಿಸಿರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಬಿಬಿಎಂಪಿ ಸಂದೇಶದಲ್ಲೇನಿದೆ?
‘ಈ ಅಪ್ಲಿಕೇಷನ್ ಸಂಖ್ಯೆಯ (ನಿರ್ದಿಷ್ಟ ಅರ್ಜಿ ಸಂಖ್ಯೆಯನ್ನು ಉಲ್ಲೇಖಿಸಿ) ಆಸ್ತಿಯ ತೆರಿಗೆಯನ್ನು ಪಾವತಿ ಮಾಡಲಾಗಿಲ್ಲ. ದಯವಿಟ್ಟು ಗಮನಿಸಿ, ತೆರಿಗೆ ಪಾವತಿಸದೇ ಇರುವುದರಿಂದ ನಿಮ್ಮನ್ನು ‘ಬಿಬಿಎಂಪಿ ಕಾಯ್ದೆ ೨೦೨೦’ರ ಅಡಿಯಲ್ಲಿ ಕ್ರಮಕ್ಕೆ ಒಳಪಡಿಸಬೇಕಾಗುತ್ತದೆ. ಇದರಲ್ಲಿ ಚರಾಸ್ತಿಗಳ ಸೀಲಿಂಗ್, ಮುಟ್ಟುಗೋಲು, ಸಬ್-ರಿಜಿಸ್ಟ್ರಾರ್ ನೀಡಿದ ಎನ್ಕಂಬರೆನ್ಸ್ ಸರ್ಟಿಫಿಕೇಟ್ ವಶಪಡಿಸಿಕೊಳ್ಳುವಿಕೆ, ಹಿಂಪಡೆಯುವಿಕೆ, ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿವೆ. ತೆರಿಗೆ ಪಾವತಿಸಲು ಈ ಲಿಂಕ್ https:// bbmptax.karnataka.gov.in/ಕ್ಲಿಕ್ ಮಾಡಿ. ಯಾವುದೇ ಸ್ಪಷ್ಟೀಕರಣಕ್ಕಾಗಿ ನಿಮ್ಮ ಸ್ಥಳೀಯ ವಾರ್ಡ್ ಅಥವಾ ಎಆರ್‌ಒ ಕಚೇರಿಯನ್ನು ಸಂಪರ್ಕಿಸಿ. ಈಗಾಗಲೇ ತೆರಿಗೆ ಪಾವತಿಸಿದ್ದರೆ ದಯವಿಟ್ಟು ನಿರ್ಲಕ್ಷಿಸಿ’ ಎಂದು ಬಿಬಿಎಂಪಿಯು ತೆರಿಗೆದಾರರಿಗೆ ಕಳುಹಿಸಿದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗಷ್ಟೇ ಬಿಬಿಎಂಪಿಯು ತೆರಿಗೆ ಪಾವತಿಸದವರ ವಿರುದ್ಧ ಕಾರ್ಯಾಚರಣೆ ನಡೆಸಿ ಅನೇಕ ಕಟ್ಟಡಗಳನ್ನು ಸೀಜ್ ಮಾಡಿತ್ತು.
ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಸೇರಿದಂತೆ ೬ ಮಂದಿ ಐಎಎಸ್ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಜವಾಬ್ದಾರಿ ಘೋಷಿಸಿ ರಾಜ್ಯ ಸರ್ಕಾರ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಿತ್ತು. ಮುನೀಶ್ ಮೌದ್ಗಿಲ್ ಅವರನ್ನು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಮೌದ್ಗಿಲ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿತ್ತು. ಇದೀಗ ಬಿಬಿಎಂಪಿ ತೆರಿಗೆ ವಂಚಕರಿಗೆ ಮತ್ತಷ್ಟು ಬಿಸಿ ಮುಟ್ಟಿಸಲು ಆರಂಭಿಸಿದೆ.

Leave a comment

Your email address will not be published. Required fields are marked *